ಉಡುಪಿ: ಉಡುಪಿಯ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸೂಕ್ತ ನಿರ್ವಹಣೆಯ ಕೊರತೆಯ ದೂರಿನ ಹಿನ್ನೆಲೆಯಲ್ಲಿ ಶಾಸಕ ಯಶ್ ಪಾಲ್ ಸುವರ್ಣ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ರೋಗಿಯ ಸಂಬಂಧಿಕರೊಬ್ಬರು ಅಧಿಕಾರಿಗಳ ಸಮ್ಮುಖದಲ್ಲೇ ಶಾಸಕರ ಗಮನಸೆಳೆದರು. ಇಲ್ಲಿ ಇಲಿ, ಜಿರಳೆ, ಸೊಳ್ಳೆ ಕಾಟ ಜೋರಾಗಿದ್ದು, ಇದರಿಂದ ರೋಗದ ಭೀತಿ ಕಾಡುತ್ತಿದೆ. ಈ ಬಗ್ಗೆ ಗಮನಹರಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ, ತಾಯಿ ಮತ್ತು ಮಕ್ಕಳಿಗೆ ಆರೋಗ್ಯಕರ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಪರಿಣಿತ ಇಂಜಿನಿಯರ್ ಕರೆಸಿ ಕಟ್ಟಡದ ವಿನ್ಯಾಸ ಬದಲಾವಣೆಗೆ ನೀಲಾನಕ್ಷೆ ಸಿದ್ಧಪಡಿಸಲಾಗುವುದು. ಆಸ್ಪತ್ರೆಯ ಅಗತ್ಯವಾಗಿರುವ ಸಲಕರಣೆ, ಸಿಬ್ಬಂದಿ ಸಹಿತ ಆಸ್ಪತ್ರೆಯ ಅಮೂಲಾಗ್ರ ಬದಲಾವಣೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಈ ಆಸ್ಪತ್ರೆಯ ಸಮಸ್ಯೆಯಿಂದಾಗಿ ಉಡುಪಿ ಆಸುಪಾಸಿನ ಬಡಜನರಿಗೆ ಆರೋಗ್ಯ ಸೇವೆ ಪಡೆಯಲು ಅನಾನುಕೂಲವಾಗುತ್ತಿದೆ. ರೋಗಿಗಳಿಗೆ ನುರಿತ ಸೇವೆ ಸಿಗುತ್ತಿಲ್ಲ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಆಸ್ಪತ್ರೆ ನಿರ್ಮಿಸಿದ ಪರಿಣಾಮ ಸರಕಾರಕ್ಕೆ ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಇಲಿ, ಜಿರಳೆ, ಸೊಳ್ಳೆ ಕಾಟದ ಬಗ್ಗೆ ಸಾರ್ವಜನಿಕರು ಗಮನಕ್ಕೆ ತಂದಿದ್ದು, ಆಸ್ಪತ್ರೆಯಲ್ಲಿ ಆರೋಗ್ಯಕರ ವಾತಾವರಣ ನಿರ್ಮಿಸುವಂತೆ ಸೂಚಿಸಿದ್ದೇನೆ ಎಂದರು.
PublicNext
03/06/2026 04:41 pm
LOADING...