ಮಂಗಳೂರು: ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಶುಶ್ರೂಷೆಗೆ ಹೆಚ್ಚಿನ ಸಂಖ್ಯೆಯಲ್ಲಿರುವುದು ಹೊರರಾಜ್ಯದ ವೈದ್ಯಕೀಯ ವಿದ್ಯಾರ್ಥಿಗಳು. ಇವರುಗಳ ಹಿಂದಿ, ಇಂಗ್ಲಿಷ್, ಮಲಯಾಳಂ ಭಾಷೆಗಳೋ ಬಡಪಾಯಿ ರೋಗಿಗಳಿಗೆ ಸುತರಾಂ ಅರ್ಥವಾಗುವುದಿಲ್ಲ. ಅದಕ್ಕಾಗಿ ವೆನ್ಲಾಕ್ ವೈದ್ಯಕೀಯ ಅಧೀಕ್ಷಕರು ವೈದ್ಯ ವಿದ್ಯಾರ್ಥಿಗಳಿಗೆ ಹೊಸ ಟಾಸ್ಕ್ ನೀಡಿದ್ದಾರೆ.
ವೆನ್ಲಾಕ್ ಸರಕಾರಿ ಆಸ್ಪತ್ರೆ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ನೆರೆಯ ಐದಾರು ಜಿಲ್ಲೆಗಳ ಬಡ ರೋಗಿಗಳ ಪಾಲಿಗೆ ನೆಚ್ಚಿನ ಆಸ್ಪತ್ರೆ. ಈ ಬಡ ರೋಗಿಗಳಿಗೆ, ಅವರ ಸಂಬಂಧಿಕರಿಗೆ ಕನ್ನಡ ಅಥವಾ ಸ್ಥಳೀಯ ತುಳು ಭಾಷೆ ಬಿಟ್ಟು ಬೇರೆ ಭಾಷೆ ಅರ್ಥವಾಗುವುದಿಲ್ಲ.
ಇನ್ನು ಇಲ್ಲಿ ಸೇವೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ಇದು ಬರುವುದೇ ಇಲ್ಲ. ಅವರೇನೋ ತಮ್ಮ ಪಾಡಿಗೆ ಇಂಗ್ಲಿಷ್, ಹಿಂದಿಯಲ್ಲಿ ಏನೋ ಹೇಳಿ ಹೋಗುತ್ತಾರೆ. ಇದು ಅರ್ಥವಾಗದ ಬಡಪಾಯಿ ರೋಗಿಗಳು ತಮಗೆ ರೋಗ ಗುಣವಾಗಿದೆಯೇ, ಇಲ್ಲ ಉಲ್ಬಣವಾಗಿದೆಯೇ, ತಾನು ಯಾವ ಔಷಧಿ ತೆಗೆದುಕೊಳ್ಳಬೇಕು ಎಂದು ತಿಳಿಯದೆ ಪೇಚಾಟಕ್ಕೆ ಸಿಲುಕಿಕೊಳ್ಳುತ್ತಾರೆ.
ಆದ್ದರಿಂದ ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಿವಪ್ರಕಾಶ್ ಅವರು ವೈದ್ಯಕೀಯ ವಿದ್ಯಾರ್ಥಿಗಳು ಕನ್ನಡದಲ್ಲೇ ರೋಗಿಗಳೊಂದಿಗೆ ವ್ಯವಹರಿಸಬೇಕು. ಮುಂದಿನ ಮೂರು ತಿಂಗಳಲ್ಲಿ ಎಲ್ಲಾ ವೈದ್ಯ ವಿದ್ಯಾರ್ಥಿಗಳು ಕನ್ನಡ ಕಲಿಯಲೇ ಬೇಕು ಎಂದು ವೈದ್ಯಕೀಯ ಕಾಲೇಜುಗಳ ಡೀನ್ಗಳಿಗೆ ಪತ್ರ ಬರೆದಿದ್ದಾರೆ. ಇದೀಗ ವೈದ್ಯ ವಿದ್ಯಾರ್ಥಿಗಳು ಟಾಸ್ಕ್ ಪೂರೈಸಲು ಸಜ್ಜಾಗುತ್ತಿದ್ದಾರೆ. ಈ ಮೂಲಕ ಬಡ ರೋಗಿಗಳ ಭಾಷೆಯ ಸಂಕಷ್ಟಕ್ಕೆ ಖಂಡಿತ ಪರಿಹಾರ ದೊರೆಯಲಿದೆ.
PublicNext
10/06/2026 12:39 pm
LOADING...