ಬೆಂಗಳೂರು : ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿ, ಹೊಸ ತಂತ್ರಜ್ಞಾನ ಆಧಾರಿತ ಹೂಡಿಕೆ ಹಾಗೂ ಬೃಹತ್ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಮಹತ್ವದ ಮಾತುಕತೆ ನಡೆಸಿದ್ದಾರೆ.
ಟಾಟಾ ಮೋಟಾರ್ಸ್ ಸಂಸ್ಥೆಯ ಸರ್ಕಾರ ಮತ್ತು ಕಾರ್ಪೊರೇಟ್ ವಿಭಾಗದ ಗ್ಲೋಬಲ್ ಹೆಡ್ ಆಗಿರುವ ಸುಶಾಂತ್ ನಾಯಕ್ ಅವರು ಇಂದು ಸಚಿವ ಎಂ.ಬಿ. ಪಾಟೀಲ್ ಅವರನ್ನು ಭೇಟಿಯಾದರು.
ಈ ಭೇಟಿಯ ಸಂದರ್ಭದಲ್ಲಿ ಇಬ್ಬರು ಗಣ್ಯರು ರಾಜ್ಯದ ಪ್ರಸಕ್ತ ಕೈಗಾರಿಕಾ ಸನ್ನಿವೇಶದ ಕುರಿತು ಸುದೀರ್ಘ ಸಮಾಲೋಚನೆ ನಡೆಸಿದರು. ಪ್ರಮುಖವಾಗಿ ಕರ್ನಾಟಕದಲ್ಲಿ ಹೂಡಿಕೆಗೆ ಇರುವ ವಿಸ್ತಾರವಾದ ಅವಕಾಶಗಳು, ಆಟೋಮೊಬೈಲ್ ಕ್ಷೇತ್ರದಲ್ಲಿನ ಹೊಸ ತಂತ್ರಜ್ಞಾನಗಳು ಹಾಗೂ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿರುವ ಎಲೆಕ್ಟ್ರಿಕ್ ವಾಹನ (EV) ಉತ್ಪಾದನೆಗೆ ನೀಡಬೇಕಾದ ಉತ್ತೇಜನದ ಕುರಿತು ಸಾರ್ಥಕ ಚರ್ಚೆಗಳು ನಡೆದವು.
ರಾಜ್ಯದಲ್ಲಿ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ವಾಹನೋದ್ಯಮ ವಲಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಟಾಟಾ ಮೋಟಾರ್ಸ್ ಸಂಸ್ಥೆ ಜೊತೆಯಾಗಿ ಮುನ್ನಡೆಯುವ ಕುರಿತು ಈ ಸಭೆಯಲ್ಲಿ ಸಕಾರಾತ್ಮಕ ಒಲವು ವ್ಯಕ್ತವಾಗಿದೆ ಎಂದು ಸಚಿವರು Xನಲ್ಲಿ ತಿಳಿಸಿದ್ದಾರೆ.
PublicNext
10/06/2026 05:07 pm
LOADING...