ವಿಜಯಪುರ: ಕೈಗೊಂಡ ಆ ಒಂದು ಸತ್ಕಾರ್ಯ, ಹತ್ತಾರು ಜನರಿಗೆ ಹೇಗೆ ದಾರಿದೀಪವಾಗುತ್ತದೆ ಎಂಬುದಕ್ಕೆ ವಿಜಯಪುರದ ಯುವಕರ ಈ ಸಾಧನೆಯೇ ಸಾಕ್ಷಿ. 2016ರಲ್ಲಿ ಸಚಿವ ಎಂ.ಬಿ. ಪಾಟೀಲ್ ನೇತೃತ್ವದಲ್ಲಿ ಆರಂಭವಾದ 'ಕೋಟಿವೃಕ್ಷ ಅಭಿಯಾನ'ದಿಂದ ಪ್ರೇರಣೆ ಪಡೆದ ವಿಜಯಪುರದ ಯುವಕರು, ಇಂದು ಬಂಜರು ಜಾಗವನ್ನು ನಂದನವನವನ್ನಾಗಿ ಪರಿವರ್ತಿಸಿ ಪರಿಸರ ಪ್ರೇಮ ಮೆರೆದಿದ್ದಾರೆ. ಯುವಕರ ಈ ಹಸಿರು ಸಾಧನೆಯನ್ನು ಸಚಿವ ಎಂ.ಬಿ. ಪಾಟೀಲ್ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
300 ಮರಗಳ ಹಸಿರು ವೈಭವ!
ವಿಜಯಪುರ ನಗರದ ವಾರ್ಡ್ ನಂ. 2ರ ಲಿಂಗೇಶ್ವರ ಸ್ವಾಮಿ ಬಡಾವಣೆಯ ಉದ್ಯಾನವನಕ್ಕಾಗಿ ಮೀಸಲಿಟ್ಟಿದ್ದ ಖಾಲಿ ಜಾಗದಲ್ಲಿ, ಯುವಕ ಸಂತೋಷ್ ಕವಟೆಕರ್ ನೇತೃತ್ವದ ತಂಡ ಹಸಿರು ಕ್ರಾಂತಿ ಸೃಷ್ಟಿಸಿದೆ. ಈ ಜಾಗದಲ್ಲಿ ಬರೋಬ್ಬರಿ 300 ಗಿಡಗಳನ್ನು ನೆಟ್ಟು, ಪ್ರತಿದಿನ ಸ್ವತಃ ನೀರು ಉಣಿಸಿ, ಇಂದು ಅವುಗಳನ್ನು ಹಚ್ಚಹಸಿರಾದ ಮರಗಳನ್ನಾಗಿ ಬೆಳೆಸಿ ನಿಲ್ಲಿಸಿದ್ದಾರೆ. ಯುವಕರ ಈ ಪರಿಸರ ಕಾಳಜಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಶ್ರೀಗಳ ಭೇಟಿಯ ನೆನಪು ಬಿಚ್ಚಿಟ್ಟ ಯುವಕರು
ಇತ್ತೀಚೆಗೆ ಸಚಿವ ಎಂ.ಬಿ. ಪಾಟೀಲ್ ಅವರನ್ನು ಭೇಟಿಯಾದ ಯುವಕರ ತಂಡ, ತಮ್ಮ ಹಸಿರು ಜರ್ನಿಯ ನೆನಪುಗಳನ್ನು ಹಂಚಿಕೊಂಡಿದೆ. ಪ್ರಮುಖವಾಗಿ, ಕೊರೊನಾ ಸಾಂಕ್ರಾಮಿಕದ ಅವಧಿಯಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಈ ಜಾಗಕ್ಕೆ ಖುದ್ದಾಗಿ ಆಗಮಿಸಿದ್ದರು. ಯುವಕರ ಶ್ರಮವನ್ನು ಕಂಡು ಅತ್ಯಂತ ಹರ್ಷ ವ್ಯಕ್ತಪಡಿಸಿ, ಆಶೀರ್ವದಿಸಿದ್ದನ್ನು ಯುವಕರು ಭಾವುಕರಾಗಿ ಸ್ಮರಿಸಿದ್ದಾರೆ.
ಕೈಜೋಡಿಸಿದ 'ಹಸಿರು ಸೈನಿಕರು'
ಈ ಮಹತ್ಕಾರ್ಯ ಕೇವಲ ಒಬ್ಬರಿಂದ ಸಾಧ್ಯವಾಗಿಲ್ಲ, ಇದರ ಹಿಂದೆ ಇಡೀ ಯುವಕರ ಪಡೆಯ ಶ್ರಮವಿದೆ. ಸಂತೋಷ್ ಕವಟೆಕರ್ ಅವರೊಂದಿಗೆ ಬಿ.ಎಸ್. ಶೆಟ್ಟಿ, ಮಲ್ಲು ನಾಲವಾರ್, ಅಜಿತ್ ಉಪಾಧ್ಯಾಯ, ಎಂ.ಎಸ್. ಗೊಂಬಿ, ಪ್ರವೀಣ್ ಕೇಶಿ, ಸಂತೋಷ್ ಅಕೋಡೆ, ಮಹಾವೀರ ಬೋಗಾರ್ ಹಾಗೂ ಶಿವಾನಂದ ಬೆಟಗೇರಿ ಸೇರಿದಂತೆ ಹಲವರು ಈ ಹಸಿರು ಸಾಧನೆಯಲ್ಲಿ ನಿರಂತರ ಕರಸೇವೆ ಸಲ್ಲಿಸಿದ್ದಾರೆ ಎಂದು ಯುವಕರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
"ಇಂತಹ ಹಸಿರು ಸೇವೆಗಳು ಮುಂದಿನ ಪೀಳಿಗೆಗೆ ಪರಿಸರ ಜಾಗೃತಿಯ ಸಂದೇಶ ಸಾರುತ್ತವೆ. ಪ್ರತಿಯೊಬ್ಬರೂ ಸಮಾಜದ ಕಡೆಗಿನ ತಮ್ಮ ಜವಾಬ್ದಾರಿಯನ್ನು ಸಾರ್ಥಕಗೊಳಿಸಲು ಇಂತಹ ಕಾರ್ಯಗಳು ಪ್ರೇರಣೆ" ಎಂದು ಸಚಿವ ಎಂ.ಬಿ. ಪಾಟೀಲ್ ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ.
PublicNext
10/06/2026 05:38 pm