ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಹಾಗೂ ಕನ್ನಡಪರ ಹೋರಾಟದ ಪ್ರಮುಖ ನಾಯಕ ಟಿ.ಎ. ನಾರಾಯಣ ಗೌಡ ಅವರು ಬುಧವಾರ ತಮ್ಮ 60ನೇ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಸಾಕಷ್ಟು ಕನ್ನಡಪರ ಹೋರಾಟಗಾರರು ಮತ್ತು ಕಾರ್ಯಕರ್ತರು ಅವರಿಗೆ ಶುಭ ಕೋರಿದರು. ಈ ಸಂಭ್ರಮದ ನಡುವೆ, ಬಿಗ್ಬಾಸ್ ಸ್ಪರ್ಧಿ ಅಶ್ವಿನಿ ಗೌಡ ಅವರಿಂದ ನಾರಾಯಣ ಗೌಡರಿಗೆ ದುಬಾರಿ ಬೆಳ್ಳಿ ಕತ್ತಿ ಉಡುಗೊರೆಯಾಗಿ ಬಂದಿದ್ದು ವಿಶೇಷ ಆಕರ್ಷಣೆಯಾಗಿದೆ.
ಹೌದು ಕರವೇ ಮೂಲಕವೇ ಹೆಚ್ಚು ಗುರುತಿಸಿಕೊಂಡಿರುವ ನಟಿ ಹಾಗೂ 12ನೇ ಆವೃತ್ತಿಯ ಬಿಗ್ಬಾಸ್ ಸ್ಪರ್ಧಿ ಅಶ್ವಿನಿ ಗೌಡ, ನಾರಾಯಣ ಗೌಡ ಅವರ ನಿವಾಸಕ್ಕೆ ಭೇಟಿ ನೀಡಿ ಹುಟ್ಟುಹಬ್ಬದ ಶುಭಾಶಯ ಕೋರಿದರು. ಕರವೇ ಮಹಿಳಾ ಘಟಕದ ರಾಜ್ಯ ಗೌರವಾಧ್ಯಕ್ಷೆ ಕೂಡ ಆಗಿರುವ ಅಶ್ವಿನಿ ಗೌಡ, ಈ ಸಂದರ್ಭದಲ್ಲಿ ನಾರಾಯಣ ಗೌಡರಿಗೆ ಅತ್ಯಾಕರ್ಷಕ ಬೆಳ್ಳಿ ಕತ್ತಿಯನ್ನು ಉಡುಗೊರೆಯಾಗಿ ನೀಡಿದರು. ಈ ಉಡುಗೊರೆಯನ್ನು ಸ್ವೀಕರಿಸಿದ ನಾರಾಯಣ ಗೌಡ ಅವರು ಕತ್ತಿಯನ್ನು ಕೈಯಲ್ಲಿ ಹಿಡಿದು ಸಂತಸದಿಂದ ಪೋಸ್ ನೀಡಿದರು.
ಬಿಗ್ಬಾಸ್ ಸ್ಪರ್ಧೆಯ ಕೊನೆಯ ಘಟ್ಟದಲ್ಲಿ ಕರವೇ ಅಶ್ವಿನಿ ಗೌಡ ಅವರಿಗೆ ಸಾರ್ವಜನಿಕವಾಗಿ ಬೆಂಬಲ ಘೋಷಿಸಿತ್ತು. ಸ್ವತಃ ನಾರಾಯಣ ಗೌಡ ಅವರೇ ಅಶ್ವಿನಿ ಅವರು ಬಿಗ್ಬಾಸ್ ಗೆದ್ದು ಬರಬೇಕು ಎಂದು ಹೇಳಿ, ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಈ ಮೂಲಕ ಕರವೇ ಮತ್ತು ಅಶ್ವಿನಿ ಗೌಡ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿತ್ತು.
ಅಶ್ವಿನಿ ಗೌಡ ಅವರು ಈ ಕುರಿತಾದ ಪೋಸ್ಟ್ ಅನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದಾರೆ. 'ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಅಣ್ಣ ಟಿ. ಎ ನಾರಾಯಣ ಗೌಡರಿಗೆ ಪ್ರೀತಿ ತುಂಬಿದ ಹುಟ್ಟು ಹಬ್ಬದ ಶುಭಾಶಯಗಳು..' ಎಂದು ಬರೆದುಕೊಂಡಿರುವ ಅಶ್ವಿನಿ ಗೌಡ, ವಿಶೇಷ ಪೋಸ್ಟರ್ ಒಂದನ್ನೂ ಹಂಚಿಕೊಂಡು ತಮ್ಮ ಅಭಿಮಾನ ಮತ್ತು ಗೌರವವನ್ನು ವ್ಯಕ್ತಪಡಿಸಿದ್ದಾರೆ.
PublicNext
11/06/2026 12:49 pm