ಮಂಗಳೂರು : ರೈಲು ಡಿಕ್ಕಿ ಹೊಡೆದು ಕೂಲಿ ಕಾರ್ಮಿಕ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಮಂಜೇಶ್ವರ ರೈಲು ನಿಲ್ದಾಣ ಬಳಿಯಲ್ಲಿ ನಡೆದಿದೆ. ಮೊಗ್ರಾಲ್ ಪುತ್ತೂರು ಕೋಟೆಕುನ್ನು ನಿವಾಸಿ, ಹೊಸಬೆಟ್ಟು ಸ್ಫೂರ್ತಿನಗರದ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಉಮೇಶ್ (40) ಎಂಬವರು ಸಾವಿಗೀಡಾದ ವ್ಯಕ್ತಿ.
ಸಂಜೆ ಮಂಜೇಶ್ವರ ರೈಲು ನಿಲ್ದಾಣ ಬಳಿಯ ಹಳಿಯಲ್ಲಿ ರೈಲು ಡಿಕ್ಕಿ ಹೊಡೆದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಮಂಜೇಶ್ವರ ಪೊಲೀಸರು ತಲುಪಿ ಪರಿಶೀಲನೆ ನಡೆಸಿದರು. ಕಾಸರಗೋಡಿನಿಂದ ಮಂಗಳೂರು ಭಾಗಕ್ಕೆ ಸಂಚರಿಸುತ್ತಿದ್ದ ಗೂಡ್ಸ್ ರೈಲುಗಾಡಿ ಡಿಕ್ಕಿ ಹೊಡೆದಿರುವುದಾಗಿ ತಿಳಿದು ಬಂದಿದೆ.
ಕೂಲಿ ಕಾರ್ಮಿಕರಾದ ಅವರು ಸುಮಾರು 5 ವರ್ಷಗಳಿಂದ ಪತ್ನಿಯೊಂದಿಗೆ ಹೊಸಬೆಟ್ಟು ಸ್ಫೂರ್ತಿನಗರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಮೃತರು ಪತ್ನಿ ತಾರಾ, ಸಹೋದರ ಸಹೋದರಿಯರಾದ ಶಶಿಧರ, ಅನಿಲ್ಕುಮಾರ್, ಇಂದಿರಾ, ಗೀತಾ, ಜಯಶ್ರೀ, ಸುಜಾತ ಅವರನ್ನು ಅಗಲಿದ್ದಾರೆ. ಈ ದಂಪತಿಗೆ ಮಕ್ಕಳಿಲ್ಲ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನೊಂದು ಘಟನೆಯಲ್ಲಿ ಮಂಜೇಶ್ವರ ಕೀರ್ತೇಶ್ವರ ದೇವಸ್ಥಾನ ಸಮೀಪದ ಬಾಡಿಗೆ ಮನೆಯಲ್ಲಿ ವಾಸಿಸುವ ಮನೀಶ್ (18) ಸಾವಿಗೀಡಾದ ಘಟನೆ ನಡೆದಿದೆ. ಮಂಗಳವಾರ ರಾತ್ರಿ ಮಂಜೇಶ್ವರ ಪರಿಸರದ ರೈಲು ಹಳಿಯಲ್ಲಿ ಅವರ ಮೃತದೇಹ ಕಂಡುಬಂದಿದ್ದು, ರೈಲು ಡಿಕ್ಕಿ ಹೊಡೆದಿರಬಹುದೆಂದು ಅಂದಾಜಿಸಲಾಗಿದೆ. ಪಿಯುಸಿ ಶಿಕ್ಷಣ ಪೂರ್ತಿಗೊಳಿಸಿದ ಬಳಿಕ ಅವರು ಫ್ಯಾಬ್ರಿಕೇಶನ್ ಕೆಲಸ ನಿರ್ವಹಿಸುತ್ತಿದ್ದರು. ಕುಂಬಳೆ ಬಳಿ ಭಾಗದಲ್ಲಿ ಕೆಲಸ ಮುಗಿಸಿ ಮರಳುತ್ತಿದ್ದಾಗ ಮಂಗಳೂರಿನಿಂದ ಕಣ್ಣೂರು ಭಾಗಕ್ಕೆ ತೆರಳುತ್ತಿದ್ದ ಗೂಡ್ಸ್ ರೈಲು ಡಿಕ್ಕಿ ಹೊಡೆದಿರಬಹುದೆಂದು ಸಂಶಯಿಸಲಾಗಿದೆ.
PublicNext
11/06/2026 03:54 pm