ಕಡೂರು : ಜಮೀನೊಂದರಲ್ಲಿ ರಾಜಾರೋಷವಾಗಿ ನಡೆಯುತ್ತಿದ್ದ ಅಕ್ರಮ ಇಸ್ಪೀಟು ಜೂಜಾಟದ ಅಡ್ಡೆಗೆ ಕಡೂರು ಪೊಲೀಸರು ಮಿಂಚಿನ ದಾಳಿ ನಡೆಸಿದ್ದಾರೆ. ಕಡೂರು ತಾಲೂಕಿನ ಬೀರನಹಳ್ಳಿ ಗ್ರಾಮದ ಪೊಲೀಸರು ನಡೆಸಿದ ದಾಳಿ ವೇಳೆ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ದು, ಉಳಿದ ಆರು ಮಂದಿ ಎಸ್ಕೇಪ್ ಆಗಿದ್ದಾರೆ.
ಬೀರನಹಳ್ಳಿ ಗ್ರಾಮದ ತಿಮ್ಮಾನಾಯ್ಕ ಎಂಬುವವರ ಜಮೀನಿಗೆ ಹೋಗುವ ಮಣ್ಣು ರಸ್ತೆಯ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟುಕೊಂಡು 'ಅಂದರ್-ಬಾಹರ್' ಇಸ್ಪೀಟು ಜೂಜಾಟ ಆಡಲಾಗುತ್ತಿತ್ತು. ಈ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಕಡೂರು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪಿಎಸ್ಐ ಸಜಿತ್ ಕುಮಾರ್ ಹಾಗೂ ಅವರ ಸಿಬ್ಬಂದಿ ಪಂಚರ ಸಮ್ಮುಖದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದರು.
ಪೊಲೀಸರು ಜೂಜಾಟದ ಅಡ್ಡೆಗೆ ತಲುಪುತ್ತಿದ್ದಂತೆ ಅಲ್ಲಿದ್ದ 8 ರಿಂದ 10 ಜನರ ಗುಂಪು ಚೆಲ್ಲಾಪಿಲ್ಲಿಯಾಗಿ ಓಡಲಾರಂಭಿಸಿದೆ. ಬೆನ್ನಟ್ಟಿದ ಪೊಲೀಸರು ಮಾಡಾಳು ಗ್ರಾಮದ ಸಚಿನ್ ಎಂ.ಎನ್. ಮತ್ತು ದೇವರಹಳ್ಳಿ ಗ್ರಾಮದ ಪ್ರಸನ್ನ ಡಿ.ಎಸ್. ಎಂಬ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಬಸವರಾಜ, ರಮೇಶ್, ಮಾರುತಿ, ಮಂಜಾನಾಯ್ಕ, ಶಶಿ ಮತ್ತು ದರ್ಶನ್ ಎಂಬ ಆರು ಮಂದಿ ಸ್ಥಳದಿಂದ ಪರಾರಿಯಾಗಿದ್ದಾರೆ.
ದಾಳಿ ನಡೆದ ಸ್ಥಳದಲ್ಲಿ ಕಪ್ಪು ಬಣ್ಣದ ಟಾರ್ಪಾಲಿನ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ 52 ಇಸ್ಪೀಟು ಎಲೆಗಳು ಹಾಗೂ ಜೂಜಾಟಕ್ಕೆ ಬಳಸಿದ್ದ 2,800 ರೂಪಾಯಿ ನಗದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ತಪ್ಪಿಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಜಾಲ ಬೀಸಿರುವ ಕಡೂರು ಪೊಲೀಸರು, ಅಕ್ರಮ ಜೂಜಾಟದ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.
PublicNext
11/06/2026 08:13 pm
LOADING...