ಮುಂಬೈ: ಸಾರ್ವಜನಿಕ ರಸ್ತೆಯಲ್ಲಿ ಬಿಯರ್ ಕುಡಿಯುತ್ತಿದ್ದ ವ್ಯಕ್ತಿಯೊಬ್ಬನಿಗೆ ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಕಾರ್ಯಕರ್ತರು ಕಾನೂನನ್ನು ಕೈಗೆತ್ತಿಕೊಂಡು ಮನಬಂದಂತೆ ಥಳಿಸಿರುವ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಎಕ್ಸ್ (ಟ್ವಿಟರ್) ನಲ್ಲಿ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಾರ್ವಜನಿಕ ರಸ್ತೆಯಲ್ಲಿ ಕುಳಿತು ವ್ಯಕ್ತಿಯೊಬ್ಬ ಬಿಯರ್ ಸೇವಿಸುತ್ತಿದ್ದ ಎನ್ನಲಾಗಿದೆ. ಇದನ್ನು ಗಮನಿಸಿದ ಎಂಎನ್ಎಸ್ ಕಾರ್ಯಕರ್ತರ ಗುಂಪೊಂದು ಆತನಿಗೆ ತೀವ್ರವಾಗಿ ಥಳಿಸಿದೆ. ಈ ದೃಶ್ಯಾವಳಿಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯ ಕುರಿತು ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿರುವ ಅಮಿತ್ ಕುಮಾರ್ ಸಿಂಧಿ ಎಂಬುವವರು, ಎಂಎನ್ಎಸ್ ಕಾರ್ಯಕರ್ತರ ಗೂಂಡಾಗಿರಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.
"ಸಾರ್ವಜನಿಕ ರಸ್ತೆಯಲ್ಲಿ ಬಿಯರ್ ಕುಡಿಯುವುದು ತಪ್ಪು ಮತ್ತು ಅದಕ್ಕಾಗಿ ಪೊಲೀಸರು ಕ್ರಮ ಕೈಗೊಳ್ಳಬಹುದು. ಆದರೆ ಈ ರೀತಿ ಒಬ್ಬ ಮನುಷ್ಯನಿಗೆ ಹೊಡೆಯುವ ಹಕ್ಕನ್ನು ಎಂಎನ್ಎಸ್ ಕಾರ್ಯಕರ್ತರಿಗೆ ಕೊಟ್ಟವರು ಯಾರು? ಆತ ಯಾರ ಮೇಲೂ ಹಲ್ಲೆ ನಡೆಸುತ್ತಿರಲಿಲ್ಲ, ಯಾರಿಗೂ ಕಿರುಕುಳ ನೀಡುತ್ತಿರಲಿಲ್ಲ ಅಥವಾ ಗಲಭೆ ಸೃಷ್ಟಿಸುತ್ತಿರಲಿಲ್ಲ. ಒಂದು ವೇಳೆ ಆತ ಕಾನೂನು ಮುರಿದಿದ್ದರೆ, ಆತನನ್ನು ಪೊಲೀಸರಿಗೆ ಒಪ್ಪಿಸಬೇಕಿತ್ತು," ಎಂದು ಅವರು ಬರೆದುಕೊಂಡಿದ್ದಾರೆ.
:ಯಾರಾದರೂ ತಪ್ಪು ಮಾಡಿದರೆ ಅಥವಾ ಕಾನೂನು ಉಲ್ಲಂಘಿಸಿದರೆ ಅದನ್ನು ನಿಯಂತ್ರಿಸಲು ಮತ್ತು ಶಿಕ್ಷಿಸಲು ದೇಶದಲ್ಲಿ ಪೊಲೀಸ್ ವ್ಯವಸ್ಥೆ ಹಾಗೂ ನ್ಯಾಯಾಲಯಗಳಿವೆ. ಆದರೆ ರಾಜಕೀಯ ಪಕ್ಷಗಳ ಕಾರ್ಯಕರ್ತರು ತಾವೇ ಪೊಲೀಸರಂತೆ ವರ್ತಿಸಿ, ಸಾರ್ವಜನಿಕರ ಮೇಲೆ ಹಲ್ಲೆ ನಡೆಸುತ್ತಿರುವುದು ಎಷ್ಟು ಸರಿ? ಇಂತಹ ನೈತಿಕ ಪೊಲೀಸ್ಗಿರಿಗೆ ಬ್ರೇಕ್ ಹಾಕುವುದು ಯಾರು ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
PublicNext
12/06/2026 01:40 pm