ಉಡುಪಿ: 2047 ರ ವೇಳೆಗೆ ಭಾರತವನ್ನು ವಿಕಸಿತ ರಾಷ್ಟ್ರವನ್ನಾಗಿಸುವ ಸಂಕಲ್ಪವನ್ನು ಪ್ರಧಾನಿ ನರೇಂದ್ರ ಮೋದಿಯವರು ಹೊಂದಿದ್ದು, ಸಬ್ ಕಾ ವಿಕಾಸ್, ಸಬ್ ಕಾ ಸಾಥ್, ಸಬ್ ಕಾ ಪ್ರಯಾಸ್ ಧ್ಯೇಯ ವಾಕ್ಯದಡಿ ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಕೇಂದ್ರ ವಿತ್ತಸಚಿವೆ, ನಿರ್ಮಲಾ ಸೀತಾರಾಮನ್ ಹೇಳಿದರು.
ಉಡುಪಿಯಲ್ಲಿ ನಡೆದ ಬಿಜೆಪಿ ಪ್ರಶಿಕ್ಷಣ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ಕೇಂದ್ರ, ರಾಜ್ಯ, ಸ್ಥಳೀಯಾಡಳಿತ ಸಂಸ್ಥೆಗಳು ಹಾಗೂ ನಾಗರಿಕರು ಒಟ್ಟಾಗಿ ಪ್ರಯತ್ನಿಸಿದರೆ ಮಾತ್ರ ವಿಕಸಿತ ಭಾರತ ಕನಸು ನನಸಾಗಲು ಸಾಧ್ಯ ಎಂದರು.
ಕೇಂದ್ರ ಸರಕಾರದ ವಿವಿಧ ಜನಪರ ಯೋಜನೆಗಳು ಶೇಕಡಾ ನೂರು ಫಲಾನುಭವಿಗಳಿಗೆ ತಲುಪಿಸಲು ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಬೇಕು. ಪ್ರಧಾನ ಮಂತ್ರಿ ಆವಾಸ್ ಯೋಜನೆ, ಜಲಜೀವನ್, ಮುದ್ರಾ, ವಿಶ್ವಕರ್ಮ, ಸ್ವನಿಧಿ, ಮುಂತಾದ ಎಲ್ಲಾ ಯೋಜನೆಗಳು ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು. ಭಾರತೀಯ ಆರ್ಥಿಕತೆ ಬಗ್ಗೆ ವಿರೋಧ ಪಕ್ಷಗಳು ನಕಾರಾತ್ಮಕವಾಗಿ ಬಿಂಬಿಸಲು ಯತ್ನಿಸುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವಿಪಕ್ಷಗಳು ಹರಡುತ್ತಿರುವ ಸುಳ್ಳು ಪ್ರಚಾರಕ್ಕೆ ತಿರುಗೇಟು ನೀಡಿ, ವಿಕಸಿತ ಭಾರತಕ್ಕಾಗಿ ಕೈಜೋಡಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ದೇಶದ ಆರ್ಥಿಕತೆ ಉತ್ತಮ ಬೆಳವಣಿಗೆ ಹೊಂದಿದ್ದು ಉತ್ಪಾದನೆ, ಸೇವೆ, ಕೃಷಿ ಹಾಗೂ ಸಾರಿಗೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ದಾಖಲಾಗಿದೆ. ಕೈಗಾರಿಕೆಗಳ ಹೂಡಿಕೆ ಹೆಚ್ಚಾಗಿದ್ದು, ಜಿಎಸ್ಟಿ ಸಂಗ್ರಹಣೆಯಲ್ಲಿ ಏರಿಕೆ ಕಂಡಿದ್ದು, ನಾಲ್ಕನೇ ತ್ರೈಮಾಸಿಕದಲ್ಲಿ ಶೇ. 7.8 ರಷ್ಟು ಜಿಡಿಪಿ ಬೆಳವಣಿಗೆ ದಾಖಲಿಸಿದೆ ಎಂದರು.
PublicNext
13/06/2026 07:05 pm
LOADING...