ಚಿಕ್ಕಮಗಳೂರು: ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಚಿಕ್ಕಮಗಳೂರಿನ ಕೆ ಆರ್ ಎಸ್ ಆಸ್ಪತ್ರೆಯಲ್ಲಿ ಜೆಸಿಐ ಚಿಕ್ಕಮಗಳೂರು ಮಲ್ನಾಡ್ ಸಂಸ್ಥೆಯ ವತಿಯಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಆಸ್ಪತ್ರೆಗೆ ಬರುವ ತುರ್ತು ರೋಗಿಗಳಿಗೆ ಹಾಗೂ ರಕ್ತದ ಅವಶ್ಯಕತೆ ಇರುವ ಬಡ ಜನರಿಗೆ ಸಕಾಲದಲ್ಲಿ ನೆರವು ನೀಡುವ ಉದಾತ್ತ ಉದ್ದೇಶದಿಂದ ಈ ಜೀವದಾನದ ಮಹತ್ಕಾರ್ಯವನ್ನು ಆಯೋಜಿಸಲಾಗಿದ್ದು. ಈ ಶಿಬಿರಕ್ಕೆ ಆಸ್ಪತ್ರೆಯ ಡಾ. ಯೋಗೇಶ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ರಕ್ತವನ್ನು ಯಾವುದೇ ಪ್ರಯೋಗಾಲಯದಲ್ಲಿ ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ, ಒಬ್ಬರು ನೀಡುವ ರಕ್ತ ಮತ್ತೊಬ್ಬರ ಅಮೂಲ್ಯವಾದ ಜೀವವನ್ನು ಉಳಿಸುವ ಶಕ್ತಿ ಹೊಂದಿದೆ. ಇಂತಹ ಮಾನವೀಯ ಮತ್ತು ಸತ್ಕಾರ್ಯಗಳಲ್ಲಿ ಇಂದಿನ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು. ವಿಶ್ವ ರಕ್ತದಾನಿಗಳ ದಿನದಂದೇ ಇಂತಹದ್ದೊಂದು ಅರ್ಥಪೂರ್ಣ ಮತ್ತು ಅಗತ್ಯವಾದ ಶಿಬಿರವನ್ನು ಹಮ್ಮಿಕೊಂಡ ಜೆಸಿಐ ಸಂಸ್ಥೆಯ ಸಾಮಾಜಿಕ ಕಳಕಳಿಯನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದರು.
ಈ ರಕ್ತದಾನ ಶಿಬಿರದಲ್ಲಿ ಜೆಸಿಐ ಚಿಕ್ಕಮಗಳೂರು ಮಲ್ನಾಡ್ ಸಂಸ್ಥೆಯ ಅಧ್ಯಕ್ಷ ತಿಲಕ್ ದತ್ ಮತ್ತು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಅನಿಲ್ ಆನಂದ್ ಭಾಗವಹಿಸಿದ್ದರು. ಇವರೊಂದಿಗೆ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳು ಹಾಗೂ ಜೆಸಿಐ ಸಂಸ್ಥೆಯ ಪದಾಧಿಕಾರಿಗಳು ರಕ್ತದಾನದ ಯಶಸ್ಸಿಗೆ ಸಾಕ್ಷಿಯಾದರು. ಶಿಬಿರದಲ್ಲಿ ಸಂಸ್ಥೆಯ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ವಿಶ್ವ ರಕ್ತದಾನಿಗಳ ದಿನಾಚರಣೆಗೆ ನೈಜ ಸಾರ್ಥಕತೆಯನ್ನು ತಂದುಕೊಟ್ಟರು.
Kshetra Samachara
15/06/2026 01:11 pm