ಕಳಸ : ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರದಲ್ಲಿ ಒಂದಾದ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ ಹಾಗೂ ದಕ್ಷಿಣ ಕಾಶಿ ಕಳಸೇಶ್ವರ ದೇವಸ್ಥಾನ ಸೇರಿದಂತೆ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಮತ್ತು ಪ್ರವಾಸಿಗರು ಆಗಮಿಸುತ್ತಾರೆ.
ಆದರೆ ಇಲ್ಲಿಗೆ ಬರುವ ಜನರಿಗೆ ಹಾಗೂ ಸ್ಥಳೀಯರಿಗೆ ಸರಿಯಾದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ತೀವ್ರ ತೊಂದರೆ ಅನುಭವಿಸುತ್ತಿದ್ದರು. ಸಾರ್ವಜನಿಕರ ಈ ಪ್ರಮುಖ ಸಮಸ್ಯೆಯನ್ನು ಮನಗಂಡ ಕಳಸ ರೋಟರಿ ಕ್ಲಬ್, ಶ್ಲಾಘನೀಯ ಹೆಜ್ಜೆಯೊಂದನ್ನು ಇಟ್ಟಿದೆ.
ಕಳಸ ಪಟ್ಟಣದ ಹೊರನಾಡು ರಸ್ತೆಯಲ್ಲಿರುವ ಕೆಪಿಎಸ್ ಶಾಲೆಯ ಬಸ್ ತಂಗುದಾಣಕ್ಕೆ ಹೊಂದಿಕೊಂಡಂತೆ ಅತ್ಯಾಧುನಿಕ ಹಾಗೂ ಸುಸಜ್ಜಿತವಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿದೆ. ಈ ಅತ್ಯಾಧುನಿಕ ಘಟಕವು ಬರೋಬ್ಬರಿ ಎರಡು ಸಾವಿರ ಲೀಟರ್ ಸಾಮರ್ಥ್ಯವನ್ನು ಹೊಂದಿದ್ದು, ಪ್ರತಿ ಗಂಟೆಗೆ 500 ಲೀಟರ್ನಷ್ಟು ಪರಿಶುದ್ಧವಾದ ಕುಡಿಯುವ ನೀರನ್ನು ಒದಗಿಸುವ ತಂತ್ರಜ್ಞಾನವನ್ನು ಒಳಗೊಂಡಿದೆ.
ಸಾರ್ವಜನಿಕರಿಗೆ ಅತ್ಯಂತ ಕಡಿಮೆ ದರದಲ್ಲಿ ಈ ನೀರಿನ ಸೌಲಭ್ಯ ಸಿಗಲಿದ್ದು, ಕೇವಲ ಒಂದು ರೂಪಾಯಿ ಪಾವತಿಸಿ ಒಂದು ಲೀಟರ್ ಶುದ್ಧ ನೀರನ್ನು ಪಡೆದುಕೊಳ್ಳಬಹುದು. ಇನ್ನು 20 ಲೀಟರ್ನಷ್ಟು ಹೆಚ್ಚಿನ ಪ್ರಮಾಣದ ನೀರು ಬೇಕಾದಲ್ಲಿ ಕೇವಲ 5 ರೂಪಾಯಿ ಪಾವತಿಸಿ ಕೊಂಡೊಯ್ಯುವ ವ್ಯವಸ್ಥೆಯನ್ನು ಇಲ್ಲಿ ಕಲ್ಪಿಸಲಾಗಿದೆ. ಈ ಅತ್ಯಾಧುನಿಕ ಘಟಕವನ್ನು ಜಿಲ್ಲಾ ರೋಟರಿ ಗವರ್ನರ್ ಪಾಲಾಕ್ಷ ಅವರು ಸಾರ್ವಜನಿಕರ ಬಳಕೆಗೆ ಚಾಲನೆ ನೀಡಿದರು.
ಕಳಸಕ್ಕೆ ಬರುವ ಪ್ರವಾಸಿಗರಿಗೆ ಮತ್ತು ಭಕ್ತಾದಿಗಳಿಗೆ ಇಂತಹದೊಂದು ಅತ್ಯುತ್ತಮ ನೀರಿನ ಘಟಕ ಬೇರೆಲ್ಲೂ ಲಭ್ಯವಿರಲಿಲ್ಲ. ತಮಗೆ ಎದುರಾಗುತ್ತಿದ್ದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿದ ರೋಟರಿ ಕ್ಲಬ್ ಕಾರ್ಯದ ಬಗ್ಗೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
PublicNext
15/06/2026 12:16 pm