ಚಿಕ್ಕಮಗಳೂರು: ಮಳೆಗಾಲದ ಆರಂಭದ ಸವಿ ನೆನಪಿಗೆ ಕಾಫಿನಾಡಿನಲ್ಲಿ ಹಲಸು ಮತ್ತು ಮಾವಿನ ಹಣ್ಣುಗಳ ವೈವಿಧ್ಯಮಯ ಖಾದ್ಯಗಳ ಅದ್ದೂರಿ ಮೇಳ ಅನಾವರಣಗೊಂಡಿದೆ. ನಗರದ ಒಕ್ಕಲಿಗರ ಭವನದಲ್ಲಿ ಆರಂಭವಾಗಿರುವ ಈ ವಿಶಿಷ್ಟ ಮೇಳವು ಪ್ರಕೃತಿಯ ಈ ಅಪೂರ್ವ ಕೊಡುಗೆಯನ್ನು ಸವಿಯಲು ಸಾರ್ವಜನಿಕರು ಸಾಗರೋಪಾದಿಯಲ್ಲಿ ಹರಿದುಬರುತ್ತಿದ್ದಾರೆ.
ಸಾಮಾನ್ಯವಾಗಿ ಮಳೆಗಾಲದ ತಂಪು ಹವಾಮಾನದಲ್ಲಿ ಬಿಸಿಬಿಸಿ ತಿಂಡಿಗಳನ್ನು ಬಯಸುವ ಜನರಿಗೆ ಈ ಮೇಳವು ಹೊಸ ರುಚಿಯ ದಾರಿಯನ್ನೇ ತೋರಿಸಿಕೊಟ್ಟಿದೆ. ಇಲ್ಲಿ ಹಣ್ಣುಗಳನ್ನು ಕೊಳ್ಳುವುದಕ್ಕಿಂತ ಹೆಚ್ಚಾಗಿ, ಅವುಗಳಿಂದ ತಯಾರಿಸಲಾದ ವಿಭಿನ್ನ ಅಡುಗೆಗಳನ್ನು ಸವಿಯಲು ಜನ ಮುಗಿಬೀಳುತ್ತಿರುವುದು ವಿಶೇಷವಾಗಿದೆ.
ಈ ಇಡೀ ಮೇಳದಲ್ಲಿ ಪ್ರಮುಖ ಆಕರ್ಷಣೆಯಾಗಿ ಮೂಡಿಬಂದಿರುವುದು ಹಲಸಿನ ಕಾಯಿ ಬಿರಿಯಾನಿ ಮತ್ತು ಕಬಾಬ್. ಸಾಮಾನ್ಯವಾಗಿ ಬಿರಿಯಾನಿ ಮತ್ತು ಕಬಾಬ್ ಎಂದರೆ ಮಾಂಸಾಹಾರಿಗಳಿಗಷ್ಟೇ ಸೀಮಿತ ಎಂಬ ಭಾವನೆ ಇರುತ್ತದೆ. ಆದರೆ ಇಲ್ಲಿ ಸಿದ್ಧಪಡಿಸಲಾಗಿರುವ ಎಳೆಯ ಹಲಸಿನಕಾಯಿ ಹಾಗೂ ಹಲಸಿನ ಬೀಜಗಳ ಬಿರಿಯಾನಿಯು ತನ್ನ ವಿಶಿಷ್ಟ ರುಚಿ ಮತ್ತು ಸುವಾಸನೆಯಿಂದಾಗಿ ಮಾಂಸಾಹಾರಿ ಬಿರಿಯಾನಿಯನ್ನೇ ಹೋಲುವಂತಿದೆ. ಸಮೃದ್ಧ ಪೋಷಕಾಂಶಗಳನ್ನು ಒಳಗೊಂಡಿರುವ ಈ ಖಾದ್ಯವು ಸಸ್ಯಾಹಾರಿಗಳಷ್ಟೇ ಅಲ್ಲದೆ, ಮಾಂಸಾಹಾರಿಗಳ ಮನಸ್ಸನ್ನೂ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಮಾವಿನ ಹಣ್ಣಿನ ಜಿಲೇಬಿಯೂ ಕೂಡ ಸಿಹಿಪ್ರಿಯರ ಬಾಯಲ್ಲಿ ನೀರೂರಿಸುತ್ತಿದೆ.
ಇಲ್ಲಿನ ದರಪಟ್ಟಿಯೂ ಕೂಡ ಜನಸಾಮಾನ್ಯರಿಗೆ ಕೈಗೆಟುಕುವಂತಿದ್ದು, ಒಂದು ಪ್ಲೇಟ್ ಹಲಸಿನ ಬಿರಿಯಾನಿಗೆ 100 ರೂಪಾಯಿ ಬಿಸಿಬಿಸಿ ಹಲಸಿನ ಕಬಾಬ್ ಪ್ರತಿ ಪ್ಲೇಟ್ಗೆ 150 ರೂಪಾಯಿವರೆಗೆ ಮಾರಾಟವಾಗುತ್ತಿದೆ. ಚಿಕ್ಕಮಗಳೂರಿನ ಸಂಜೆಯ ಮುದ ನೀಡುವ ಚಳಿಗೆ ಇಲ್ಲಿನ ಬಿಸಿಬಿಸಿ ಬಿರಿಯಾನಿ ಮತ್ತು ಕಬಾಬ್ ಸವಿಯುವುದೇ ಒಂದು ಅದ್ಭುತ ಅನುಭವ ಎನ್ನುತ್ತಾರೆ ಇಲ್ಲಿಗೆ ಭೇಟಿ ನೀಡಿದ ಆಹಾರ ಪ್ರಿಯರು.
PublicNext
15/06/2026 11:29 am
LOADING...