ಚಿಕ್ಕಮಗಳೂರು: ಪಂಚ ಗ್ಯಾರಂಟಿ ವಿಚಾರದಲ್ಲಿ ವಿರೋಧ ಪಕ್ಷದವರು ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಾನಂದ ಸ್ವಾಮಿ ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಮತ್ತು ಇವು ಸದಾ ಅಬಾಧಿತವಾಗಿರಲಿವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ರೇವಣ್ಣ ಅವರು ಈಗಾಗಲೇ ಮಾಧ್ಯಮಗಳ ಮೂಲಕ ಸ್ಪಷ್ಟಪಡಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಯಾವುದೇ ಯೋಜನೆಗಳನ್ನು ಪರಿಷ್ಕರಣೆ ಮಾಡದೆಯೇ ದೀರ್ಘಕಾಲ ಮುಂದುವರಿಸಲು ಸಾಧ್ಯವಿಲ್ಲ. ಯೋಜನೆಗಳಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಹಾಗೂ ತಿದ್ದುಪಡಿ ತರಲು ಪರಿಷ್ಕರಣೆ ಅಗತ್ಯವಾಗಿರುತ್ತದೆ. ಗೃಹಲಕ್ಷ್ಮಿ ಯೋಜನೆಯಲ್ಲಿ ಯಜಮಾನಿ ಮೃತರಾದ ಸಂದರ್ಭದಲ್ಲಿ ಅವರ ಮನೆಯ ಸೊಸೆ ಅಥವಾ ಮತ್ತೊಬ್ಬರನ್ನು ಯಜಮಾನಿಯನ್ನಾಗಿ ಮಾಡಲು ತಿದ್ದುಪಡಿ ಮಾಡಬೇಕಾಗುತ್ತದೆ. ತಾಂತ್ರಿಕ ಕಾರಣಗಳಿಂದಾಗಿ ಆದಾಯ ತೆರಿಗೆ ಪಾವತಿಸುವವರು ಕೂಡ ಯೋಜನೆಗೆ ಅರ್ಜಿ ಸಲ್ಲಿಸಿದ್ದು, ಅವರಿಗೆ ಯೋಜನೆಗಳು ಸಿಗುವುದಿಲ್ಲ ಎಂದು ತಿಳಿದಿದ್ದರೂ ಅರ್ಜಿಗಳು ಹಾಕಿದ್ದಾರೆ. ಇಂತಹ ಅರ್ಜಿಗಳನ್ನು ಇಟ್ಟುಕೊಂಡು ಜನರಿಗೆ ಸೌಲಭ್ಯ ತಲುಪಿಲ್ಲ ಎಂದು ದೂರುವ ಬದಲು, ಪರಿಷ್ಕರಣೆ ನಡೆಸಿದಾಗ ಯೋಜನೆಗಳ ನೈಜ ಚಿತ್ರಣ ದೊರೆಯುತ್ತದೆ ಎಂದು ಅವರು ವಿವರಿಸಿದ್ದಾರೆ. ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿದಂತೆ ಐದೂ ಗ್ಯಾರಂಟಿ ಯೋಜನೆಗಳು ಖಂಡಿತವಾಗಿಯೂ ನಿಲ್ಲುವುದಿಲ್ಲ. ಇದರೊಂದಿಗೆ ಭೂ ಗ್ಯಾರಂಟಿ ಹಾಗೂ ವಿದ್ಯಾರ್ಥಿಗಳ ಬಸ್ ಪಾಸ್ ಸೌಲಭ್ಯಗಳು ಕೂಡ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಅತ್ಯಂತ ಸ್ಪಷ್ಟವಾಗಿ, ಯಾವುದೇ ಗೊಂದಲವಿಲ್ಲದೆ ಮುಂದುವರಿಯುತ್ತಿವೆ. ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಲು ಸಮಿತಿ, ಸರ್ಕಾರ ಹಾಗೂ ಸೂಕ್ತ ವ್ಯವಸ್ಥೆ ಇದ್ದು, ಲೋಪಗಳನ್ನು ಶೀಘ್ರದಲ್ಲೇ ಬಗೆಹರಿಸಲಾಗುತ್ತದೆ. ಆದ್ದರಿಂದ ಜಿಲ್ಲೆಯ ಸಾರ್ವಜನಿಕರು ಯಾವುದೇ ರೀತಿಯ ಸುಳ್ಳು ವದಂತಿಗಳಿಗೆ ಕಿವಿಗೊಟ್ಟು ಗೊಂದಲಕ್ಕೊಳಗಾಗಬಾರದು ಎಂದು ಶಿವಾನಂದ ಸ್ವಾಮಿ ಮನವಿ ಮಾಡಿದ್ದಾರೆ.
PublicNext
17/06/2026 01:23 pm
LOADING...