ಶಿವಮೊಗ್ಗ : ತೀರ್ಥಹಳ್ಳಿ ತಾಲ್ಲೂಕಿನ ಮಹಿಷಿ ಉತ್ತರಾದಿ ಮಠದಲ್ಲಿ ನಿನ್ನೆ ಕಳ್ಳತನವಾಗಿತ್ತು. ಮಹಿಷಿ ಉತ್ತರಾದಿ ಮಠದಲ್ಲಿ ಬುಧವಾರ ಮಧ್ಯಾಹ್ನ ನಡೆದಿದ್ದ ಬೃಹತ್ ಕಳವು ಪ್ರಕರಣವನ್ನು ಪೊಲೀಸರು ಕೇವಲ 1 ದಿನದಲ್ಲಿ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳುವಾಗಿದ್ದ 1 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಮಾಳೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ತೀರ್ಥಹಳ್ಳಿ ತಾಲ್ಲೂಕು ಬಾಳಗಾರು ಸಮೀಪ ಇರುವ ತುಂಗಾ ನದಿಯ ದಡದಲ್ಲಿರುವ ಮಹಿಷಿ ಮಠದಲ್ಲಿ ಮಧ್ವ ಪರಂಪರೆಯ ಪ್ರಖ್ಯಾತ ಯತಿಗಳಲ್ಲಿ ಒಬ್ಬರಾದ ಉತ್ತರಾದಿ ಮಠದ 26 ನೇ ಪೀಠಾಧಿಪತಿ ಶ್ರೀ ಸತ್ಯಸಂಧ ತೀರ್ಥರ ಮೂಲ ಬೃಂದಾವನ ಇದೆ. ಹಾಗಾಗಿ ಇಲ್ಲಿ ಪ್ರತಿದಿನ ಭಕ್ತರು ಬರುತ್ತಾರೆ.
ಈ ಮಧ್ಯೆ ನಿನ್ನೆ ಬುಧವಾರ ನಡೆದಿದ್ದ ಗುರುವಂದನೆ ಕಾರ್ಯಕ್ರಮದ ವೇಳೆ ಗರ್ಭಗುಡಿಯಲ್ಲಿದ್ದ ಚಿನ್ನದ ವಸ್ತುಗಳು ಕಾಣೆಯಾಗಿದ್ದವು. ಈ ಸಂಬಂಧ ಮಾಳೂರು ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿ ಆ ತಕ್ಷಣವೇ ಎಫ್ಐಆರ್ ಸಹ ದಾಖಲಾಗಿತ್ತು. ಒಟ್ಟು 1 ಕೋಟಿ 1 ಲಕ್ಷದ 40 ಸಾವಿರ ರೂಪಾಯಿ ಮೌಲ್ಯದ, ಒಟ್ಟು 780 ಗ್ರಾಂ ತೂಕದ 16 ಚಿನ್ನದ ಹಲಗಾರತಿಗಳನ್ನು ಕಳವು ಮಾಡಲಾಗಿತ್ತು ಎಂದು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
ಇದೀಗ ಘಟನೆ ನಡೆದು 24 ಗಂಟೆ ಕಳೆಯುವಷ್ಟರಲ್ಲಿ ಪ್ರಕರಣ ಭೇದಿಸಿದ್ದು, ಮಾಳೂರು ಪೊಲೀಸ್ ಠಾಣೆಯ ಪೊಲೀಸರು, ಶಿವಮೊಗ್ಗ ನಗರದ ಗಾಂಧಿನಗರ ನಿವಾಸಿ 25 ವರ್ಷದ ರಾಘವೇಂದ್ರ ಆಚಾರ್ಯ ಎಂಬಾತನನ್ನು ಅರೆಸ್ಟ್ ಮಾಡಿ ಆತನ ಬಳಿಯಿಂದ ಚಿನ್ನದ ವಸ್ತುಗಳನ್ನ ಸೀಜ್ ಮಾಡಿದ್ದಾರೆ.
ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿಶೇಷ ತಂಡ ರಚಿಸಲಾಗಿತ್ತು. ಈ ಟೀಂ ತೀರ್ಥಹಳ್ಳಿ ಠಾಣಾ ಪಿ.ಐ. ಇಮ್ರಾನ್ ಬೇಗ್ ಹಾಗೂ ಮಾಳೂರು ಸರ್ಕಲ್ ಇನ್ಸ್ಪೆಕ್ಟರ್ ರಾಜಶೇಖರ್ ಎಲ್. ರವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿತ್ತು. ತಂಡದಲ್ಲಿ ಮಾಳೂರು ಪಿ.ಎಸ್.ಐ ಸುನಿಲ್, ಹಾಗೂ ಸಿಬ್ಬಂದಿಗಳಾದ ಅಂಗೇಗೌಡ, ಸುರಕ್ಷಿತ್, ಕುಮಾರ್, ರವಿ, ಸುರೇಶ್ ನಾಯ್ಕ, ಸಂತೋಷ್, ವಿನಯ್ ಕುಮಾರ್ ಮತ್ತು ಜೀಪ್ ಚಾಲಕ ಅವಿನಾಶ್ ಅವರುಗಳು ಪಾಲ್ಗೊಂಡಿದ್ದರು.
Kshetra Samachara
18/06/2026 07:13 pm