ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಈ ಬಾರಿ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದು, ಮಳೆಯ ತವರು ಎಂದೇ ಹೆಸರಾದ ಜಿಲ್ಲೆಯ ರೈತರು ಈಗ ಆಕಾಶದತ್ತ ಮುಖ ಮಾಡಿ ಕಣ್ಣೀರು ಇಡುವಂತಾಗಿದೆ. ಮುಂಗಾರು ಸಮರ್ಪಕವಾಗಿ ಸುರಿಯಬಹುದು ಎಂಬ ದೊಡ್ಡ ಆಶಾವಾದದೊಂದಿಗೆ ಸಾಲ-ಸೋಲ ಮಾಡಿ ಬೀನ್ಸ್, ಕ್ಯಾರೇಟ್, ಮೂಲಂಗಿ ಹಾಗೂ ಆಲೂಗಡ್ಡೆ ಸೇರಿದಂತೆ ಹತ್ತಾರು ಬಗೆಯ ತರಕಾರಿ ಬೆಳೆಗಳನ್ನು ಬೆಳೆದಿದ್ದ ರೈತ ಸಮುದಾಯಕ್ಕೆ ಈಗ ಭೀಕರ ಬರದ ಮುನ್ಸೂಚನೆ ಎದುರಾಗಿದೆ. ರಸಗೊಬ್ಬರ ಮತ್ತು ಬೀಜಗಳ ಬೆಲೆ ಗಗನಕ್ಕೇರಿದ್ದರೂ ಧೃತಿಗೆಡದೆ ಹೊಲ ಹಸನು ಮಾಡಿದ್ದ ಅನ್ನದಾತನಿಗೆ ಪ್ರಕೃತಿಯ ಮುನಿಸು ದೊಡ್ಡ ಆಘಾತ ನೀಡಿದೆ.
ಮಳೆಯಿಲ್ಲದೆ ತರಕಾರಿ ಬೆಳೆಗಳು ದಿನದಿಂದ ದಿನಕ್ಕೆ ಒಣಗುತ್ತಿದ್ದು, ಹಲವು ಕಡೆಗಳಲ್ಲಿ ಈಗಾಗಲೇ ಬೆಳೆಗಳು ಸಂಪೂರ್ಣವಾಗಿ ಹಣ್ಣಾಗಿ ಒಣಗಿ ನಿಂತಿವೆ. ಕನಿಷ್ಠ ಹಾಕಿದ ಬಂಡವಾಳವಾದರೂ ಕೈಸೇರಲಿದೆಯೇ ಎಂಬ ಆತಂಕದಲ್ಲಿ ರೈತರಿದ್ದಾರೆ. ಮಲೆನಾಡು, ಅರೆಮಲೆನಾಡು ಹಾಗೂ ಬಯಲುಸೀಮೆ ಎಂಬ ಮೂರು ವಿಭಿನ್ನ ಹವಾಗುಣಗಳನ್ನು ಹೊಂದಿರುವ ಚಿಕ್ಕಮಗಳೂರು ಜಿಲ್ಲೆಯ ಒಂಬತ್ತೂ ತಾಲೂಕುಗಳಲ್ಲಿ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ. ಕೇವಲ ತರಕಾರಿ ಬೆಳೆಗಳು ಮಾತ್ರವಲ್ಲದೆ ಕಾಫಿ, ಮೆಣಸು, ಅಡಿಕೆ ಹಾಗೂ ತೆಂಗಿನಂತಹ ಪ್ರಮುಖ ವಾಣಿಜ್ಯ ಬೆಳೆಗಳಿಗೂ ಈ ಬರದ ಬಿಸಿ ತಟ್ಟಿದ್ದು, ಇಡೀ ಜಿಲ್ಲೆಯ ರೈತ ಸಮುದಾಯ ಕಂಗಾಲಾಗಿದೆ. ಬರುವ ಒಂದು ವಾರದಲ್ಲಿ ಮಳೆ ಬಾರದಿದ್ದರೆ ಹೊಲದಲ್ಲಿರುವ ಅಳಿದುಳಿದ ಬೆಳೆಗಳೂ ಸಂಪೂರ್ಣವಾಗಿ ನಾಶವಾಗುವ ಭೀತಿ ಆವರಿಸಿದೆ. ಈ ಕುರಿತು ನಮ್ಮ ಚಿಕ್ಕಮಗಳೂರು ಪ್ರತಿನಿಧಿ ಡ್ಯಾನಿ ನಡೆಸಿರುವ ಪ್ರತ್ಯಕ್ಷ ವರದಿ ಇಲ್ಲಿದೆ.
PublicNext
19/06/2026 01:30 pm
LOADING...