ಬೆಂಗಳೂರು: ನಗರದಲ್ಲಿ ಪೊಲೀಸ್ರೆ ತಲೆ ತಗ್ಗಿಸುವಂತಹ ಕೆಲಸ ನಡೆದಿದೆ. ಸಿಐಡಿ ಇನ್ಸ್ಪೆಕ್ಟರ್ 20 ಲಕ್ಷ ರೂ. ಮೌಲ್ಯದ ದರೋಡೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಕೇಳಿಬಂದಿದೆ. ಮಡಿವಾಳದ ಖಾಸಗಿ ಹೋಟೆಲ್ ಬಳಿ ನಡೆದ ಈ ಕೃತ್ಯದಲ್ಲಿ ಇಬ್ಬರು ಯುವಕರಿಂದ ಹಣ ವಸೂಲಿ ಮಾಡಿ, ಲಕ್ಷಾಂತರ ರೂ. ದರೋಡೆ ಮಾಡಿಸಿದ್ದಾರೆ ಎನ್ನಲಾಗಿದೆ. ಸಿಐಡಿ ಇನ್ಸ್ಪೆಕ್ಟರ್ 20 ಲಕ್ಷ ದರೋಡೆ ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆ ಇನ್ಸ್ಪೆಕ್ಟರ್ ಫೋನ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದಾರೆ.
ಕೇರಳ ಮೂಲದ ಇಬ್ಬರು ಯುವಕರಿಂದ 20 ಲಕ್ಷ ರೂ. ದರೋಡೆ ಮಾಡಲಾಗಿದೆ. ಆರೋಪಿಗಳು ಸಿಐಡಿ ಪೊಲೀಸ್ ಜೀಪ್ನಲ್ಲಿ ಬಂದು, ತಮ್ಮನ್ನು ಪೊಲೀಸರೆಂದು ಪರಿಚಯಿಸಲು ಪೊಲೀಸ್ ಐಡಿ ಕಾರ್ಡ್ಗಳನ್ನು ತೋರಿಸಿದ್ದಾರಂತೆ. ಮಡಿವಾಳದ ಖಾಸಗಿ ಹೋಟೆಲ್ಗೆ ಯುವಕರನ್ನು ಕರೆಸಿ, ಮನಿ ಟ್ರೇಡಿಂಗ್ಗಾಗಿ ಹಣ ತಂದಿದ್ದೀರಾ? ಎಂದು ಬೆದರಿಸಿ, ಹಲ್ಲೆ ನಡೆಸಿ ಹಣ ವಸೂಲಿ ಮಾಡಿದ್ದಾರೆ. ಈ ದರೋಡೆಯಲ್ಲಿ ಉಪೇಂದ್ರ ಮತ್ತು ಕುಮಾರ್ ಎಂಬ ಖಾಸಗಿ ವ್ಯಕ್ತಿಗಳು ಇನ್ಸ್ಪೆಕ್ಟರ್ ಸೂಚನೆ ಮೇರೆಗೆ ಭಾಗಿಯಾಗಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಪೊಲೀಸರೆಂದು ನಂಬಿ ಹಣ ಕೊಟ್ಟಿದ್ದ ಕೇರಳದ ಯುವಕರು, ನಂತರ ಮೋಸ ಹೋಗಿರುವುದನ್ನು ಅರಿತು ಮಡಿವಾಳ ಠಾಣೆಗೆ ದೂರು ನೀಡಿದ್ದಾರೆ. ಹಣ ಕಳೆದುಕೊಂಡವರು ಈ ವೇಳೆ ನಡೆದ ಘಟನೆಯ ವಿಡಿಯೋ ಮಾಡಿಕೊಂಡಿದ್ದರು. ಡಿಸಿಪಿ ಮೊಹಮ್ಮದ್ ಸಜೀತಾ ನೇತೃತ್ವದಲ್ಲಿ ತನಿಖೆ ಕೈಗೊಂಡ ಪೊಲೀಸರು, ದರೋಡೆಯಲ್ಲಿ ಭಾಗಿಯಾಗಿದ್ದ ಓರ್ವ ಖಾಸಗಿ ವ್ಯಕ್ತಿಯನ್ನು ಬಂಧಿಸಿದ್ದಾರೆ. ತನಿಖೆ ವೇಳೆ ಸಿಐಡಿ ಇನ್ಸ್ಪೆಕ್ಟರ್ ಸಹ ದರೋಡೆಗೆ ಬಳಸಲಾದ ಜೀಪ್ನಲ್ಲಿ ಇದ್ದದ್ದು ಪತ್ತೆಯಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಇನ್ಸ್ಪೆಕ್ಟರ್ ತಮ್ಮ ಫೋನ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದಾರೆ. ಪ್ರಸ್ತುತ, ದರೋಡೆಗೆ ಬಳಸಲಾದ ಸಿಐಡಿ ಇನ್ಸ್ಪೆಕ್ಟರ್ಗೆ ಸೇರಿದ ಪೊಲೀಸ್ ಜೀಪ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
PublicNext
19/06/2026 05:46 pm