ಬೆಂಗಳೂರು: ರಾಜ್ಯದ ಪೊಲೀಸ್ ವೈರ್ಲೆಸ್ ಕೇಂದ್ರ ಕಚೇರಿಗೆ ಗೃಹ ಸಚಿವ ಪ್ರಿಯಾಂಖ್ ಖರ್ಗೆ ಭೇಟಿ ನೀಡಿದ್ದಾರೆ. ನಿನ್ನೆ ಎಂಜಿ ರಸ್ತೆಯ ಕಚೇರಿಗೆ ಭೇಟಿ ನೀಡಿದ್ದು ಈ ವೇಳೆ ಡಿಜಿ ಐಜಿ ಸಲೀಂ ವೈರ್ಲೆಸ್ ಎಡಿಜಿಪಿ ಮುರುಗನ್ ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ರು. ಇಲ್ಲಿನ ಅತ್ಯಾಧುನಿಕ ಕಂಟ್ರೋಲ್ ರೂಂ ಪರಿಶೀಲನೆ ನಡೆಸಿ ನಂತರ ಗೃಹಸಚಿವ ಪ್ರಿಯಾಂಕ್ ಖರ್ಗೆ , ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ರು.
ದೇಶಾದ್ಯಂತ ಸೈಬರ್ ಅಪರಾಧಗಳು ಮತ್ತು ಆನ್ಲೈನ್ ವಂಚನೆ ಪ್ರಕರಣಗಳು ರಾಕೆಟ್ ವೇಗದಲ್ಲಿ ಹೆಚ್ಚುತ್ತಿದ್ದು, ಇದಕ್ಕೆ ಬ್ರೇಕ್ ಹಾಕಲು ಕರ್ನಾಟಕ ಸರ್ಕಾರ ಮತ್ತು ಪೊಲೀಸ್ ಇಲಾಖೆ ಈಗ ಅತ್ಯಾಧುನಿಕ ಅಸ್ತ್ರವನ್ನು ಕೈಗೆತ್ತಿಕೊಂಡಿರೋ ಮಾಹಿತಿಯನ್ನ ಗೃಹ ಸಚಿವರು ನೀಡಿದ್ದಾರೆ.
ಸೈಬರ್ ವಂಚನೆಗೆ ಒಳಗಾದ ಸಾರ್ವಜನಿಕರ ಹಣವನ್ನು ಬ್ಯಾಂಕ್ಗಳಲ್ಲೇ ತಡೆಹಿಡಿಯಲು 'ಲಿಯನ್ ಮಾರ್ಕ್' (Lien Mark) ಪ್ರಕ್ರಿಯೆಯಲ್ಲಿ ಕರ್ನಾಟಕ ಇಡೀ ದೇಶದಲ್ಲೇ ಅತ್ಯುನ್ನತ ಸಾಧನೆ ಮಾಡಿದೆ. ಮಹಾರಾಷ್ಟ್ರದಲ್ಲಿ 3,203 ಕೋಟಿ ರೂಪಾಯಿ ವಂಚನೆಯಲ್ಲಿ ಶೇಕಡಾ 17 ರಷ್ಟು ಹಣ ಬ್ಲಾಕ್ ಆಗಿದ್ದರೆ, ಕರ್ನಾಟಕ ಪೊಲೀಸರು 2,640 ಕೋಟಿ ರೂಪಾಯಿ ಪೈಕಿ 436 ಕೋಟಿ ರೂಪಾಯಿಯನ್ನು ಯಶಸ್ವಿಯಾಗಿ ತಡೆಹಿಡಿದಿದ್ದಾರೆ.
ಇಲಾಖೆ ತಂದ ಸುಧಾರಣೆಗಳಿಂದಾಗಿ ಈಗ ದೂರು ನೀಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. 2026ರ ಮೊದಲ 5 ತಿಂಗಳಲ್ಲೇ ಬರೋಬ್ಬರಿ 10 ಲಕ್ಷಕ್ಕೂ ಅಧಿಕ ಕರೆಗಳು ಬಂದಿದ್ದು, 90 ಸಾವಿರಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಈ ಅವಧಿಯಲ್ಲಿ ವಂಚನೆಯಾಗಿದ್ದ 807 ಕೋಟಿ ರೂಪಾಯಿ ಪೈಕಿ ಈಗಾಗಲೇ 216 ಕೋಟಿ ರೂಪಾಯಿ, ಅಂದರೆ ಶೇಕಡಾ 27 ರಷ್ಟು ಹಣವನ್ನು ತಕ್ಷಣವೇ ಬ್ಲಾಕ್ ಮಾಡಲಾಗಿದ್ಯಂತೆ.
ಸಾರ್ವಜನಿಕರ ಹಣ ಮರಳಿ ಕೊಡಿಸಲು ಇಲಾಖೆ ಹಲವು ಬಿಗಿ ಕ್ರಮಗಳನ್ನು ಕೈಗೊಂಡಿದ್ದು. ಬ್ಯಾಂಕ್ ಫಾಲೋ-ಅಪ್ಗಾಗಿ ಪ್ರತ್ಯೇಕ ಟೀಮ್, ಸಿಸಿಟಿವಿ ದೃಶ್ಯಾವಳಿ ಮತ್ತು ಎಫ್ಐಆರ್ಗಾಗಿ ವಿಶೇಷ ಸಂಪರ್ಕ ಅಧಿಕಾರಿಗಳನ್ನು ನೇಮಿಸಲಾಗಿದೆ. ಸಿಬ್ಬಂದಿಗೆ ರಾಷ್ಟ್ರೀಯ ಸೈಬರ್ ಕ್ರೈಮ್ ಪೋರ್ಟಲ್ (I4C) ಬಳಕೆಯ ಬಗ್ಗೆ ವಿಶೇಷ ತರಬೇತಿಯನ್ನೂ ನೀಡಲಾಗಿದೆ
ದೂರು ಪ್ರಕ್ರಿಯೆಯನ್ನು ಸುಲಭಗೊಳಿಸಲು ತಂತ್ರಜ್ಞಾನದ ಕ್ರಾಂತಿಯನ್ನೇ ಮಾಡಲಾಗಿದೆ. 2025 ರ ವೆಬ್-ಬಾಟ್ ಹಾಗೂ 2026 ರ ವಾಟ್ಸಾಪ್ ಕಂಪ್ಲೇಂಟ್ ಬಾಟ್ ಜನರಿಗೆ ವರದಾನವಾಗಿದೆ. ಕಾಲ್ ಕಟ್ ಆದರೂ ಸ್ವಯಂಚಾಲಿತ ಬಾಟ್ ಲಿಂಕ್ ಗ್ರಾಹಕರಿಗೆ ತಲುಪುತ್ತದೆ. ಬ್ಯಾಂಕ್ ವಹಿವಾಟುಗಳನ್ನು ತಕ್ಷಣ ನಿರ್ಬಂಧಿಸಲು 51 ಪಿಎಸ್ಐ ಮತ್ತು ಹೆಡ್ ಕಾನ್ಸ್ಟೆಬಲ್ಗಳು ದಿನದ 24 ಗಂಟೆಯೂ ಅಲರ್ಟ್ ಆಗಿರುತ್ತಾರಂತೆ.
ಒಟ್ಟಾರೆಯಾಗಿ, ತಂತ್ರಜ್ಞಾನ ಹಾಗೂ ದಕ್ಷ ಅಧಿಕಾರಿಗಳ ಸಮಯೋಚಿತ ಕ್ರಮದಿಂದಾಗಿ ಕರ್ನಾಟಕವು ಸೈಬರ್ ವಂಚಕರ ಪಾಲಿಗೆ ಸಿಂಹಸ್ವಪ್ನವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಮತ್ತು ಸಾರ್ವಜನಿಕರ ಹಣಕ್ಕೆ ರಕ್ಷಣೆ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಗೃಹಸಚಿವರು ತಿಳಿಸಿದ್ದಾರೆ.
PublicNext
20/06/2026 08:23 am