ಬೆಂಗಳೂರು: ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರಾದ ಡಾ: ರಾಜೇಂದ್ರ ಕೆ.ವಿ. ರವರು ಇಂದು ಇಟ್ಟಮಡು ಕೆರೆ (ಚಿಕ್ಕಲಸಂದ್ರ ಕೆರೆ) ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೆರೆ ಪ್ರದೇಶದಲ್ಲಿ ಕಸ ಸುರಿಯುತ್ತಿರುವ ಬಗ್ಗೆ ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ಆಯುಕ್ತರು, ಸಂಗ್ರಹವಾಗಿರುವ ಕಸವನ್ನು ಕೂಡಲೇ ತೆರವುಗೊಳಿಸಬೇಕು ಎಂದು ಆದೇಶಿಸಿದರು.
ಕೆರೆ ವಿಸ್ತೀರ್ಣವನ್ನು ಸರ್ವೆ ಮಾಡುವಂತೆ ಸರ್ವೇಯರ್ಗಳಿಗೆ ಸೂಚಿಸಿದ ಆಯುಕ್ತರು, ಕೆರೆ ಸ್ವಚ್ಛಗೊಳಿಸಿ, ಅಭಿವೃದ್ಧಿಪಡಿಸಿ ಕೆರೆಗೆ ಸುತ್ತ ಬೇಲಿ ಹಾಕಿ, ಬೆಳಕಿನ ವ್ಯವಸ್ಥೆ ಮಾಡಿ, ದಿನದ 24 ಗಂಟೆ ಮಾರ್ಷಲ್ಗಳು ನಿಗಾ ವಹಿಸುವಂತೆ, ಸಿಸಿಟಿವಿ ಕೂಡ ಅಳವಡಿಸಿ ನಿಗಾ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಪಾದಚಾರಿ ಮಾರ್ಗದಲ್ಲಿ ನಡೆದಾಡಿದ ಆಯುಕ್ತರು, ಪಾದಚಾರಿ ಮಾರ್ಗಗಳು ರಸ್ತೆ ಮಟ್ಟಕ್ಕಿಂತ ಹೆಚ್ಚು (ಅಗತ್ಯಕ್ಕಿಂತ) ಎತ್ತರವಾಗಿದ್ದು, ಮಕ್ಕಳು, ವೃದ್ಧರಿಗೆ ಹತ್ತಲು/ಇಳಿಯಲು ಕಷ್ಟವಾಗುವ ರೀತಿ ಇರುವಂತಿದ್ದಲ್ಲಿ ಅಂತಹ ಸ್ಥಳಗಳಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಿ, ಆ ಮೂಲಕ ಪಾದಚಾರಿಗಳಿಗೆ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಮನೆಗಳ ಕಾಂಪೌಂಡ್ ಗೇಟ್ಗಳು ಪಾದಚಾರಿ ಮಾರ್ಗದ ಕಡೆಗೆ ತೆರೆದುಕೊಳ್ಳುವಂತಿದ್ದು, ಪಾದಚಾರಿಗಳಿಗೆ ಅಡ್ಡಿಯಾಗುವಂತಿದ್ದರೆ ಅಂತಹ ಮನೆಗಳ ಮಾಲೀಕರಿಗೆ ಗೇಟ್ಗಳನ್ನು ಒಳಭಾಗಕ್ಕೆ ತೆರೆದುಕೊಳ್ಳುವಂತೆ ಮಾರ್ಪಡಿಸಲು ಸೂಚಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ಬಸವನಗುಡಿ ವಾರ್ಡ್ನಲ್ಲಿ ಮೋದಿ ಆಸ್ಪತ್ರೆಗೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಆಸ್ಪತ್ರೆಯಲ್ಲಿ ಲಭ್ಯರಿರುವ ವೈದ್ಯರು, ರೋಗಿಗಳ ಸಂಖ್ಯೆ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದು ಆರೋಗ್ಯ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
ಅಲ್ಲದೆ, ಇತರ ವಿವಿಧ ವಾರ್ಡ್ಗಳಲ್ಲಿ ಸಂಬಂಧಿತ ಕಾರ್ಯಪಾಲಕ ಅಭಿಯಂತರರು, ಸಹಾಯಕ ಅಭಿಯಂತರರು ಪಾದಚಾರಿ ಮಾರ್ಗಗಳ ಅಭಿವೃದ್ಧಿ ಪರಿಶೀಲಿಸಿದರು.
ಈ ವೇಳೆ ಮುಖ್ಯ ಅಭಿಯಂತರರಾದ ಬಸವರಾಜ ಕಬಾಡೆ, ವಾಕಲೂರು ಎನ್ಜಿಒ ಸ್ಥಾಪಕ ಅರುಣ್ ಪೈ ಮತ್ತು ಇತರ ಅಧಿಕಾರಿಗಳು ಹಾಜರಿದ್ದರು.
ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರಾದ ಡಾ: ರಾಜೇಂದ್ರ ಕೆ.ವಿ. ರವರು ಇಂದು ಗೋವಿಂದರಾಜನಗರದ ಬಿಜಿಎಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿದರು. ಆಸ್ಪತ್ರೆಯಲ್ಲಿನ ಸೌಲಭ್ಯಗಳು ಮತ್ತು ಸೇವೆಗಳ ಬಗ್ಗೆ ಪರಿಶೀಲಿಸಿದರು. ಹೊರರೋಗಿ ಮತ್ತು ಒಳರೋಗಿ ವಿಭಾಗಗಳಿಗೆ ಭೇಟಿ ನೀಡಿ, ರೋಗಿಗಳೊಂದಿಗೆ ಸಂವಾದ ನಡೆಸಿದರು.
ಗೋವಿಂದರಾಜನಗರದಲ್ಲಿ ಅಭಿಯಂತರರೊಂದಿಗೆ ಸಭೆ:
ಬಳಿಕ ಆಯುಕ್ತರು, ನಗರ ಪಾಲಿಕೆಯ ಗೋವಿಂದರಾಜನಗರ ವಿಭಾಗದ ಕಾರ್ಯಪಾಲಕ ಅಭಿಯಂತರರು ಮತ್ತು ಸಹಾಯಕ ಪ್ರಧಾನ ವ್ಯವಸ್ಥಾಪಕ (ಘನತ್ಯಾಜ್ಯ ನಿರ್ವಹಣೆ)ರೊಂದಿಗೆ ಸಭೆ ನಡೆಸಿ ಅಗತ್ಯ ನಿರ್ದೇಶನಗಳನ್ನು ನೀಡಿದರು.
PublicNext
20/06/2026 09:55 pm