ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಣ್ಣಿದ್ದೂ ಕುರುಡರಾಗಬೇಡಿ: ಜನಹಿತಕ್ಕಿಂತ ಪಕ್ಷ ದೊಡ್ಡದೇ..?

ಪ್ರಜಾಪ್ರಭುತ್ವದಲ್ಲಿ ರಾಜಕೀಯ ಪಕ್ಷಗಳು ಅಗತ್ಯ. ಆದರೆ ಪಕ್ಷದ ಮೇಲಿನ ಅತಿಯಾದ ಅಂಧಾಭಿಮಾನ ಸಮಾಜದ ಅಭಿವೃದ್ಧಿಗೆ ಅಡ್ಡಿಯಾಗಬಾರದು. ಒಂದು ಪಕ್ಷವನ್ನು ಬೆಂಬಲಿಸುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ಆದರೆ ಅದೇ ಪಕ್ಷದ ತಪ್ಪುಗಳನ್ನು ಪ್ರಶ್ನಿಸದೆ, ಜನರ ಸಮಸ್ಯೆಗಳನ್ನು ಕಡೆಗಣಿಸುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಒಳ್ಳೆಯದಲ್ಲ.

ಇಂದು ಹಲವೆಡೆ ರಸ್ತೆಗಳು ಹದಗೆಟ್ಟಿವೆ, ಕುಡಿಯುವ ನೀರಿನ ಸಮಸ್ಯೆ ಇದೆ, ಒಳಚರಂಡಿ ವ್ಯವಸ್ಥೆ ಅಸ್ತವ್ಯಸ್ತವಾಗಿದೆ, ಬೀದಿ ದೀಪಗಳ ಕೊರತೆ, ಕಸದ ಸಮಸ್ಯೆ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳ ಅಭಾವ ಜನರನ್ನು ಕಾಡುತ್ತಿದೆ. ಇವೆಲ್ಲವೂ ಕಣ್ಣೆದುರೇ ನಡೆಯುತ್ತಿದ್ದರೂ, ಕೆಲವರು ತಾವು ಬೆಂಬಲಿಸುವ ಪಕ್ಷದ ಘನತೆ ಉಳಿಸಿಕೊಳ್ಳುವ ನೆಪದಲ್ಲಿ ಮೌನವಾಗುತ್ತಿದ್ದಾರೆ. ತಪ್ಪು ಕಂಡರೂ ತಪ್ಪಲ್ಲ ಎನ್ನುವ ಮನೋಭಾವ ಬೆಳೆಸಿಕೊಳ್ಳುತ್ತಿದ್ದಾರೆ.

ನಿಜವಾದ ಪಕ್ಷದ ಕಾರ್ಯಕರ್ತ ಅಥವಾ ಬೆಂಬಲಿಗ ಎಂದರೆ ತಪ್ಪುಗಳನ್ನು ಮುಚ್ಚಿಹಾಕುವ ವ್ಯಕ್ತಿಯಲ್ಲ. ಬದಲಾಗಿ, ತನ್ನ ಪಕ್ಷದ ಜನಪ್ರತಿನಿಧಿಗಳು ಇನ್ನಷ್ಟು ಉತ್ತಮವಾಗಿ ಕೆಲಸ ಮಾಡುವಂತೆ ಒತ್ತಾಯಿಸುವ ವ್ಯಕ್ತಿ. ಜನರ ಸಮಸ್ಯೆಗಳನ್ನು ಅವರ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವವನೇ ನಿಜವಾದ ಜವಾಬ್ದಾರಿಯುತ ನಾಗರಿಕ.

ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳು ಜನರ ಸೇವಕರು. ಅವರನ್ನು ಪ್ರಶ್ನಿಸುವುದು, ಅಭಿವೃದ್ಧಿ ಕೇಳುವುದು, ಭರವಸೆಗಳನ್ನು ನೆನಪಿಸುವುದು ಯಾವುದೇ ಪಕ್ಷದ ವಿರುದ್ಧದ ನಡೆ ಅಲ್ಲ; ಅದು ಜನರ ಹಕ್ಕು. ಅಧಿಕಾರ ಯಾರದ್ದೇ ಆಗಿರಲಿ, ಜನರ ತೆರಿಗೆ ಹಣದಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ. ಆದ್ದರಿಂದ ಅಭಿವೃದ್ಧಿಯ ಪ್ರಶ್ನೆಗೆ ಪಕ್ಷದ ಬಣ್ಣ ಇರಬಾರದು.

ಪಕ್ಷಾಭಿಮಾನಕ್ಕಿಂತ ಊರಿನ ಅಭಿವೃದ್ಧಿ, ಜನರ ಹಿತ ಮತ್ತು ಮುಂದಿನ ಪೀಳಿಗೆಯ ಭವಿಷ್ಯ ಮುಖ್ಯ. ರಸ್ತೆ, ನೀರು, ಶಿಕ್ಷಣ, ಆರೋಗ್ಯ, ಸ್ವಚ್ಛತೆ ಮತ್ತು ಸುರಕ್ಷತೆ ಇವು ರಾಜಕೀಯದ ವಿಷಯಗಳಲ್ಲ; ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕುಗಳು.

ಹೀಗಾಗಿ, ಕಣ್ಣೆದುರಿನ ಸಮಸ್ಯೆಗಳನ್ನು ನೋಡಿ ಮೌನವಾಗಬೇಡಿ. ಪಕ್ಷವನ್ನು ಬೆಂಬಲಿಸಿ, ಆದರೆ ತಪ್ಪುಗಳನ್ನು ಪ್ರಶ್ನಿಸಿ. ಜನಹಿತಕ್ಕಾಗಿ ಧ್ವನಿಯಾಗಿರಿ. ಯಾಕೆಂದರೆ ಮೌನವು ಸಮಸ್ಯೆಯನ್ನು ಪರಿಹರಿಸುವುದಿಲ್ಲ, ಜವಾಬ್ದಾರಿಯುತ ಪ್ರಶ್ನೆಯೇ ಅಭಿವೃದ್ಧಿಯ ದಾರಿ.

ಲೇಖನ: ಶಫೀ ಉಚ್ಚಿಲ

Edited By : Nagaraj Tulugeri
PublicNext

PublicNext

08/07/2026 01:41 pm

Cinque Terre

13.41 K

Cinque Terre

1

ಸಂಬಂಧಿತ ಸುದ್ದಿ