ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೀದರ್ : ಹುಮನಾಬಾದ್ ಪೊಲೀಸರಿಗೆ ಭರ್ಜರಿ ಯಶಸ್ಸು - ₹54.74 ಲಕ್ಷ ಆಸ್ತಿ ವಶ

ಹುಮನಾಬಾದ್ ಪೊಲೀಸರು ಇಬ್ಬರು ಕುಖ್ಯಾತ ಅಂತರ್‌ರಾಜ್ಯ ಮನೆಕಳ್ಳರನ್ನು ಬಂಧಿಸಿ, ಮನೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ₹54.74 ಲಕ್ಷಕ್ಕೂ ಅಧಿಕ ಮೌಲ್ಯದ ಕಳುವಾದ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ವಿವರ:

ಹುಸೇನ್ ತಂದೆ ಶಿವಾಜಿ ಗಾಯಕ್ವಾಡ್, ವಯಸ್ಸು 45 ವರ್ಷ, ಮಹಾರಾಷ್ಟ್ರ.

ಉಮೇಶ್ ತಂದೆ ವಿಠ್ಠಲ್ ಕ್ಷತ್ರಿ, ವಯಸ್ಸು 40 ವರ್ಷ, ಬರಗುಡಿ ಗ್ರಾಮ, ಇಂಡಿ ತಾಲ್ಲೂಕು, ವಿಜಯಪುರ.

2026ರ ಮೇ 23ರ ರಾತ್ರಿ, ಅಪರಿಚಿತ ಕಳ್ಳರು ಹುಮನಾಬಾದ್ ಪಟ್ಟಣದ ಶಿವನಗರ ಕಾಲೋನಿಯಲ್ಲಿರುವ ನಾಲ್ಕು ಮನೆಗಳಿಗೆ ನುಗ್ಗಿ, ಶ್ರೀ ಶಂಕರರಾವ್ ಹಾಗೂ ಶ್ರೀ ಜಗನ್ನಾಥ್ ಅವರ ಮನೆಗಳಲ್ಲಿಯೂ ಕಳ್ಳತನ ನಡೆಸಿದರು. ಮನೆಯವರು ಇಲ್ಲದ ವೇಳೆ ಬೀಗಗಳನ್ನು ಮುರಿದು ಒಳನುಗ್ಗಿದ ಆರೋಪಿಗಳು ಚಿನ್ನ, ಬೆಳ್ಳಿ ಆಭರಣಗಳು ಹಾಗೂ ನಗದು ಹಣವನ್ನು ಕಳವು ಮಾಡಿಕೊಂಡಿದ್ದರು.

ಮೇ 25ರಂದು ನೀಡಲಾದ ದೂರುಗಳ ಆಧಾರದ ಮೇಲೆ, ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 331(4) ಹಾಗೂ 305ರ ಅಡಿಯಲ್ಲಿ ಅಪರಾಧ ಸಂಖ್ಯೆ 115/2026 ಮತ್ತು 116/2026 ಎಂದು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಯಿತು.

ಒಂದೇ ರಾತ್ರಿ ನಡೆದ ನಾಲ್ಕು ಮನೆಕಳ್ಳತನ ಪ್ರಕರಣಗಳ ಗಂಭೀರತೆಯನ್ನು ಪರಿಗಣಿಸಿ, ಬೀದರ್ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಪ್ರದೀಪ್ ಗುಂಟಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಚಂದ್ರಕಾಂತ ಪೂಜಾರಿ ಹಾಗೂ ಪೊಲೀಸ್ ಉಪಾಧೀಕ್ಷಕರಾದ ಮಡೋಳಪ್ಪ ಪಿ.ಎಸ್. ಅವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಯಿತು. ಸಿಪಿಐ ಸಂತೋಷ್ ಎಲ್. ತಟ್ಟೆಪಳ್ಳಿ ಅವರ ನೇತೃತ್ವದ ತಂಡವು ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ತನಿಖೆ ನಡೆಸಿತು. ಪ್ರಮುಖ ಆರೋಪಿಯನ್ನು ಜೂನ್ 20ರಂದು ಹಾಗೂ ಎರಡನೇ ಆರೋಪಿಯನ್ನು ಜುಲೈ 5ರಂದು ಬಂಧಿಸಲಾಯಿತು.

ವಿಚಾರಣೆ ವೇಳೆ ಆರೋಪಿಗಳಿಂದ ₹42.75 ಲಕ್ಷ ಮೌಲ್ಯದ 28.5 ತೊಲೆ ಚಿನ್ನದ ಆಭರಣಗಳು, ₹44,000 ಮೌಲ್ಯದ 22 ತೊಲೆ ಬೆಳ್ಳಿಯ ಆಭರಣಗಳು, ₹5.80 ಲಕ್ಷ ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ ₹5.75 ಲಕ್ಷ ಮೌಲ್ಯದ ವಿಟಾರಾ ಬ್ರೆಜ್ಜಾ ಕಾರನ್ನು ಪೊಲೀಸರು ವಶಪಡಿಸಿಕೊಂಡರು.

ತನಿಖೆಯಲ್ಲಿ, ಮೊದಲ ಆರೋಪಿಯ ವಿರುದ್ಧ ಬೆಳಗಾವಿ, ವಿಜಯಪುರ, ಕೊಪ್ಪಳ ಹಾಗೂ ಮಹಾರಾಷ್ಟ್ರದ ಸೋಲಾಪುರದಲ್ಲಿ ದರೋಡೆ, ಸುಲಿಗೆ ಹಾಗೂ ಕಳ್ಳತನ ಸೇರಿದಂತೆ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ. ಎರಡನೇ ಆರೋಪಿಯ ವಿರುದ್ಧ ಕಲಬುರಗಿ, ಪುಣೆ ಹಾಗೂ ಮಹಬೂಬ್‌ನಗರದಲ್ಲಿ 25ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿವೆ.

ಈ ತಂಡವು ಬೀದರ್, ಬಸವಕಲ್ಯಾಣ, ಬಳ್ಳಾರಿ ಹಾಗೂ ಹೊಸಪೇಟೆಯಲ್ಲಿ ದಾಖಲಾಗಿದ್ದ ಇನ್ನೂ 6 ಪ್ರಕರಣಗಳನ್ನು ಸಹ ಭೇದಿಸಿದೆ. ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಯಶಸ್ವಿ ಕಾರ್ಯಾಚರಣೆಗೆ ಬೀದರ್ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಪ್ರದೀಪ್ ಗುಂಟಿ ಅವರು ತನಿಖಾ ತಂಡವನ್ನು ಶ್ಲಾಘಿಸಿದ್ದಾರೆ.

Edited By : Somashekar
PublicNext

PublicNext

28/07/2026 08:33 pm

Cinque Terre

9.26 K

Cinque Terre

0

ಸಂಬಂಧಿತ ಸುದ್ದಿ