ಚಳ್ಳಕೆರೆ: ಲಾರಿಯ ಟೈರ್ ಸ್ಫೋಟಗೊಂಡು ರಾಷ್ಟ್ರೀಯ ಹೆದ್ದಾರಿ 150ಎ ಯ ಹೆಗ್ಗೆರೆ ಸಮೀಪದ ನಳಪಾಕ ಹೋಟೆಲ್ ಬಳಿ ಭಾನುವಾರ ರಾತ್ರಿ ಸುಮಾರು 10 ಗಂಟೆಗೆ ರಸ್ತೆ ಬದಿಯಲ್ಲಿ ಅಪಾಯಕಾರಿಯಾಗಿ ನಿಂತ ಘಟನೆ ನಡೆದಿದೆ.
ಇದನ್ನು ಗಮನಿಸಿದ ಹೈವೇ ಪೆಟ್ರೋಲಿಂಗ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಹಿಂಬದಿಯಿಂದ ಬರುವ ವಾಹನಗಳು ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸದಂತೆ ರಸ್ತೆ ಸುರಕ್ಷತಾ ಸಿಗ್ನಲ್ ಲೈಟ್ ಅಳವಡಿಸಲು ಮುಂದಾಗಿದ್ದಾರೆ. ಅಲ್ಲದೆ 1033 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಚಾಲಕನಿಗೆ ಸೂಚಿಸಿದಾಗ, “ನಾನು ಯಾಕೆ ಕರೆ ಮಾಡಬೇಕು?” ಎಂದು ಉಡಾಫೆಯಾಗಿ ಪ್ರತಿಕ್ರಿಯಿಸಿ ಸಿಬ್ಬಂದಿಯೊಂದಿಗೆ ಅವಾಚ್ಯ ಶಬ್ದಗಳಿಂದ ಮಾತನಾಡಿ ಗಲಾಟೆಗೆ ಮುಂದಾಗಿದ್ದಾನೆ ಎನ್ನಲಾಗಿದೆ.
ಲಾರಿಯಲ್ಲಿ ಎಷ್ಟು ಪ್ರಮಾಣದ ಸರಕು ಸಾಗಿಸಲಾಗುತ್ತಿದೆ ಎಂಬ ದಾಖಲೆ ಕೇಳಿದಾಗ ಟೋಲ್ನಲ್ಲಿ ತೋರಿಸಿದ್ದೇನೆ ಎಂದು ಉತ್ತರಿಸಿದ್ದು, ಲಾರಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಸರಕು ಸಾಗಿಸುತ್ತಿರುವ ಅನುಮಾನವೂ ವ್ಯಕ್ತವಾಗಿದೆ. ಅಲ್ಲದೆ ಚಾಲಕ ಮದ್ಯಪಾನ ಮಾಡಿದ್ದ ಸ್ಥಿತಿಯಲ್ಲಿದ್ದನೆಂಬ ಅನುಮಾನ ಸ್ಥಳೀಯರಲ್ಲಿ ಮೂಡಿದೆ.
ಘಟನೆ ಕುರಿತು ಪತ್ರಕರ್ತರೊಬ್ಬರು ಚಳ್ಳಕೆರೆ ಪೊಲೀಸ್ ಇನ್ಸ್ಪೆಕ್ಟರ್ ಕೆ. ಕುಮಾರ್ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿ, ರಾತ್ರಿ ವೇಳೆ ಸಿಗ್ನಲ್ ಇಲ್ಲದೆ ಲಾರಿ ರಸ್ತೆ ಬದಿಯಲ್ಲಿ ನಿಂತಿರುವುದರಿಂದ ಹಿಂಬದಿಯಿಂದ ಬರುವ ವಾಹನ ಡಿಕ್ಕಿ ಹೊಡೆದು ಅಪಘಾತ ಸಂಭವಿಸುವ ಮುನ್ನ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಇದಕ್ಕೆ ತಕ್ಷಣ ಸ್ಪಂದಿಸಿದ ಇನ್ಸ್ಪೆಕ್ಟರ್ ಕೆ. ಕುಮಾರ್ ಅವರು ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿ ಅಗತ್ಯ ಜಾಗೃತಿ ಹಾಗೂ ಸುರಕ್ಷತಾ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಲಾರಿ ಚಾಲಕನ ಅಸಹಕಾರದ ನಡುವೆಯೂ ಹೈವೇ ಪೆಟ್ರೋಲಿಂಗ್ ಸಿಬ್ಬಂದಿ ತಮ್ಮ ಜೀವದ ಹಂಗು ತೊರೆದು ಇತರ ವಾಹನ ಸವಾರರ ಸುರಕ್ಷತೆಗಾಗಿ ಕರ್ತವ್ಯ ನಿರ್ವಹಿಸಲು ಮುಂದಾದ ಘಟನೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
PublicNext
07/09/2026 10:09 am