ಹಾಸನ: ‘ಹುಡುಗಿ ಸಿಗುತ್ತಿಲ್ಲ, ಮದುವೆ ಮಾಡಿಸಿ ಕೊಡಿ’ ಎಂದು MBA ಪದವೀಧರ ಯುವಕನೊಬ್ಬ ಶಾಸಕನ ಮುಂದೆ ಅಳಲು ತೋಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣದಲ್ಲಿ ನಡೆದಿದೆ.
ಸೆ.12ರಂದು ಅರಕಲಗೂಡು ಕ್ಷೇತ್ರದ ಶಾಸಕ ಎ. ಮಂಜು ಅಧ್ಯಕ್ಷತೆಯಲ್ಲಿ ನಡೆದ ‘ಪ್ರಜಾ ಸೇವೆ’ ಆಂದೋಲನದಲ್ಲಿ ಆಲದಹಳ್ಳಿ ಗ್ರಾಮದ ಸಂತೋಷ್ ಎಂಬ ಯುವಕ, ಮದುವೆಯಾಗಲು ಹುಡುಗಿ ಹುಡುಕಿಕೊಡುವಂತೆ ಶಾಸಕರಿಗೆ ಅರ್ಜಿ ಸಲ್ಲಿಸಿದ್ದಾರೆ.
‘ನಾನು MBA ಪದವೀಧರ. ರೈತನ ಮಗ ಎಂಬ ಕಾರಣಕ್ಕೆ ಯಾರೂ ಮದುವೆಯಾಗಲು ಒಪ್ಪುತ್ತಿಲ್ಲ. ಮನೆ, ಆಸ್ತಿ ಹಾಗೂ ದಿನದ ದುಡಿಮೆಗೆ ಅಂಗಡಿ ಇದೆ. ಆದರೂ ಹುಡುಗಿ ಸಿಗುತ್ತಿಲ್ಲ. ಈಗಾಗಲೇ 30ಕ್ಕೂ ಹೆಚ್ಚು ಯುವತಿಯರನ್ನು ನೋಡಿದ್ದೇನೆ. ಯಾರೊಬ್ಬರೂ ಒಪ್ಪುತ್ತಿಲ್ಲ. ಅಪ್ಪ-ಅಮ್ಮ ಇಲ್ಲದ ನನಗೆ ಹುಡುಗಿ ಹುಡುಕಿಕೊಡಿ’ ಎಂದು ಸಂತೋಷ್ ಮನವಿ ಮಾಡಿದ್ದಾರೆ.
ಹಿಂದೆ ರೈತರ ಮಕ್ಕಳನ್ನು ಹುಡುಕಿ ಮದುವೆ ಮಾಡುತ್ತಿದ್ದರು. ಈಗ ರೈತನ ಮಗ ಎಂದರೆ ಯಾರೂ ಹುಡುಗಿ ಕೊಡುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಯುವಕನ ಮನವಿ ಕೇಳಿದ ಶಾಸಕ ಎ. ಮಂಜು, ‘ಮದುವೆಯಾಗದೆ ಇರುವವರು ಬದುಕುತ್ತಿದ್ದಾರೆ. ತಲೆ ಕೆಡಿಸಿಕೊಳ್ಳಬೇಡ. ನೀನೇ ಯಾರನ್ನಾದರೂ ಲವ್ ಮಾಡಿ ಮದುವೆಯಾಗು’ ಎಂದು ಸಲಹೆ ನೀಡಿ ಕಳುಹಿಸಿದ್ದಾರೆ.
PublicNext
14/09/2026 10:45 pm
LOADING...