ಮಡಿಕೇರಿ: ಕೊಡಗಿನ ಪವಿತ್ರ ಪುಣ್ಯಕ್ಷೇತ್ರ ತಲಕಾವೇರಿಯಲ್ಲಿ ಜರುಗುವ ವಾರ್ಷಿಕ ಕಾವೇರಿ ತೀರ್ಥೋದ್ಭವದ ದಿನಾಂಕ ನಿಗದಿಯಾಗಿದ್ದು, ಈ ಅಪರೂಪದ ಕ್ಷಣಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಕ್ಟೋಬರ್ 17ರಂದು ಸಂಜೆ 7 ಗಂಟೆ 50 ನಿಮಿಷಕ್ಕೆ ಸರಿಯಾಗಿ ಮೇಷ ಲಗ್ನದಲ್ಲಿ ತಾಯಿ ಕಾವೇರಿಯು ತೀರ್ಥರೂಪಿಣಿಯಾಗಿ ಆವಿರ್ಭವಿಸಲಿದ್ದಾಳೆ. ತಲಕಾವೇರಿಯ ಪವಿತ್ರ ಬ್ರಹ್ಮಕುಂಡಿಕೆಯಲ್ಲಿ ಈ ತೀರ್ಥೋದ್ಭವ ಜರುಗಲಿದ್ದು, ಈ ಅವಿಸ್ಮರಣೀಯ ಕ್ಷಣವನ್ನು ಕಣ್ತುಂಬಿಕೊಳ್ಳಲು ರಾಜ್ಯ ಹಾಗೂ ದೇಶದ ವಿವಿಧೆಡೆಯಿಂದ ಸಹಸ್ರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ.
ತೀರ್ಥೋದ್ಭವದ ಧಾರ್ಮಿಕ ವಿಧಿವಿಧಾನಗಳ ಅಂಗವಾಗಿ ಸೆಪ್ಟೆಂಬರ್ 27ರಿಂದ ಅಕ್ಟೋಬರ್ 17ರವರೆಗೆ ಕಾವೇರಿ ಜಾತ್ರಾ ಮಹೋತ್ಸವ ವಿಧ್ಯುಕ್ತವಾಗಿ ನಡೆಯಲಿದೆ. ಸೆಪ್ಟೆಂಬರ್ 27ರಂದು ಬೆಳಗ್ಗೆ 8 ಗಂಟೆ 45 ನಿಮಿಷಕ್ಕೆ ಭಾಗಮಂಡಲದ ಪ್ರಸಿದ್ಧ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಮುಂದುವರಿದು, ಅಕ್ಟೋಬರ್ 5ರಂದು ಬೆಳಗ್ಗೆ 10 ಗಂಟೆ 35 ನಿಮಿಷಕ್ಕೆ ಆಜ್ಞಾ ಮುಹೂರ್ತ ನೆರವೇರಲಿದೆ.
ಅಲ್ಲದೆ, ಅಕ್ಟೋಬರ್ 15ರಂದು ಮಧ್ಯಾಹ್ನ 12 ಗಂಟೆ 35 ನಿಮಿಷಕ್ಕೆ ಅಕ್ಷಯ ಪಾತ್ರೆ ಇರಿಸಲಾಗುವುದು ಹಾಗೂ ಅದೇ ದಿನ ಸಂಜೆ 6 ಗಂಟೆ 3 ನಿಮಿಷಕ್ಕೆ ಕಾಣಿಕೆ ಡಬ್ಬಿ ಇರಿಸುವ ಕಾರ್ಯಕ್ರಮ ಜರುಗಲಿದೆ. ಇದರ ಬೆನ್ನಲ್ಲೇ ಅಕ್ಟೋಬರ್ 17ರಂದು ಸಂಜೆ ನಿಗದಿತ ಮುಹೂರ್ತದಲ್ಲಿ ತೀರ್ಥೋದ್ಭವ ಜರುಗಲಿದ್ದು, ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.
Kshetra Samachara
16/09/2026 04:41 pm
LOADING...