ಮಡಿಕೇರಿ : ಹಿರಿಯ ನಾಗರಿಕರನ್ನು ಗೌರವ ಹಾಗೂ ಸಂತೋಷದಿಂದ ನೋಡಿಕೊಳ್ಳುವುದು ಪ್ರತಿಯೊಂದು ಕುಟುಂಬದ ಜವಾಬ್ದಾರಿಯಾಗಿದೆ. ಹಿರಿಯರು ನೆಮ್ಮದಿಯಿಂದ ಇರುವ ಮನೆ ಹಾಗೂ ಸಮಾಜವೇ ನಿಜವಾದ ಸಮೃದ್ಧಿಯ ಸಂಕೇತ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಅಭಿಪ್ರಾಯಪಟ್ಟರು.
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ನಗರದ ಗಾಂಧಿ ಮೈದಾನದಲ್ಲಿ ನಡೆದ ವಿವಿಧ ಆಟೋಟ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತಮ ಮಳೆಯೊಂದಿಗೆ ಉತ್ತಮ ಬೆಳೆ ದೊರೆಯಬೇಕಾದರೆ ಪ್ರಕೃತಿಯ ಕೃಪೆಯ ಜೊತೆಗೆ ನಮ್ಮ ಹಿರಿಯರ ಆಶೀರ್ವಾದವೂ ಅಗತ್ಯ. ಯಾವ ದೇಶದಲ್ಲಿ ಹಿರಿಯರು ನೆಮ್ಮದಿಯಿಂದ ಬದುಕುತ್ತಿದ್ದಾರೋ ಆ ದೇಶ ಸಮೃದ್ಧವಾಗಿರುತ್ತದೆ ಎಂಬ ಮಾತಿದೆ. ಅದೇ ರೀತಿ ಮನೆಯಲ್ಲಿರುವ ಉಪಕರಣಗಳು, ಸೌಲಭ್ಯಗಳು ಅಥವಾ ಹಣದ ಆಧಾರದ ಮೇಲೆ ಆ ಮನೆ ಶ್ರೀಮಂತವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಅಲ್ಲಿರುವ ತಂದೆ-ತಾಯಿ ಸಂತೋಷವಾಗಿದ್ದಾರೆಯೇ, ನೆಮ್ಮದಿಯಿಂದ ಊಟ ಮಾಡುತ್ತಿದ್ದಾರೆಯೇ ಎಂಬುದೇ ನಿಜವಾದ ಶ್ರೀಮಂತಿಕೆಯ ಮಾನದಂಡವಾಗಿದೆ ಎಂದು ನುಡಿದರು.
ಯುವಜನರು ಈ ವಿಚಾರವನ್ನು ಅರಿತುಕೊಳ್ಳಬೇಕು. ಹಿರಿಯರ ಕಣ್ಣಿನಲ್ಲಿ ನೀರು ತರಿಸಬಾರದು. ಹಿರಿಯರಿಗೆ ನೋವು ನೀಡುವ ಮನೆ ಉದ್ಧಾರವಾಗುವುದಿಲ್ಲ ಎಂಬುದು ತಮ್ಮ ವೈಯಕ್ತಿಕ ಅಭಿಪ್ರಾಯ ಎಂದರು.
ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ಕೊಡಿಸಿ, ಉತ್ತಮ ಉದ್ಯೋಗ ಪಡೆದು ವಿದೇಶಕ್ಕೆ ತೆರಳುವಂತೆ ಮಾಡುವುದು ಮಾತ್ರ ಪೋಷಕರ ಕರ್ತವ್ಯವಲ್ಲ. ವಯಸ್ಸಾದಾಗ ಅವರನ್ನು ಪ್ರೀತಿ, ಕಾಳಜಿ ಮತ್ತು ಗೌರವದಿಂದ ನೋಡಿಕೊಳ್ಳುವುದು ಕೂಡ ಮಕ್ಕಳ ಜವಾಬ್ದಾರಿಯಾಗಿದೆ ಎಂದರು.
Kshetra Samachara
20/09/2026 05:45 am
LOADING...