ಚಾಮರಾಜನಗರ : ಹಾಲಿನ ದರ ಹೆಚ್ಚಳ ಕಾಲಕಾಲಕ್ಕೆ ಆಗುತ್ತಿದೆ. ಹಾಲಿನ ದರ ಹೆಚ್ಚಳ ಹೊಸದೇನಲ್ಲ. ದರ ಹೆಚ್ಚಳ ಮಾಡದಿದ್ದರೆ ವಿಧಾನಸೌಧ ಮುತ್ತಿಗೆ ಹಾಕುತ್ತೇವೆ ಎನ್ನುವ ಹಾಲು ಒಕ್ಕೂಟಗಳ ನಿರ್ಧಾರ ಸರಿಯಲ್ಲ, ತಾಳ್ಮೆಯಿಂದ ಇರಬೇಕು ಎಂದು ಪಶುಸಂಗೋಪನೆ ಹಾಗೂ ರೇಷ್ಮೆ ಇಲಾಖೆ ಸಚಿವ ಸಿ. ಪುಟ್ಟರಂಗಶೆಟ್ಟಿ ಹೇಳಿದರು.
ಗುಂಡ್ಲುಪೇಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾಲಿನ ದರ ಹೆಚ್ಚಳ ಮಾಡುವುದಿಲ್ಲ ಎಂದು ನಾವು ಹೇಳಿಲ್ಲ. ಕೊಳ್ಳುವವರು, ಕೊಡುವವರು ಇಬ್ಬರನ್ನೂ ನೋಡಬೇಕು. ಸಾಧಕ-ಬಾಧಕಗಳ ಬಗ್ಗೆ ಸಿಎಂ ಅವರೊಂದಿಗೆ ಚರ್ಚಿಸಿ ಮಾಡುತ್ತೇವೆ. ದರ ಹೆಚ್ಚಳಕ್ಕೆ ಒತ್ತಾಯ ಮಾಡಿದ್ದಾರೆ. ಸಿಎಂ ಅವರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಬರ ಪರಿಹಾರ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಬಿತ್ತನೆ ಬೀಜ ವಿತರಣೆಗಾಗಿ ಪಶುಸಂಗೋಪನೆ ಹಾಗೂ ರೇಷ್ಮೆ ಇಲಾಖೆಯಿಂದ 25 ಕೋಟಿ ರೂ.ಗಳ ಬರ ಪರಿಹಾರ ಬಿಡುಗಡೆ ಮಾಡಿದ್ದೇವೆ. ಮೇವು ಕೇಂದ್ರ, ಗೋಶಾಲೆಯನ್ನು ತಕ್ಷಣದಲ್ಲೇ ತೆರೆಯುತ್ತೇವೆ. ಬರದ ಬಗ್ಗೆ ಹೆಚ್ಚು ಜಾಗೃತಿಯಿಂದ ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಬರದ ಬಗ್ಗೆ ಎನ್ಡಿಆರ್ಎಫ್ಗೆ ಬರೆಯಲಾಗಿದೆ. ಕೇಂದ್ರದಿಂದ ವರದಿ ಬಂದ ಕೂಡಲೇ ಪರಿಹಾರ ವಿತರಣೆ ಮಾಡುತ್ತೇವೆ. ಬೆಳೆ ವಿಮೆ ಮಾಡಿಸಿರುವ ರೈತರಿಗೆ ಇನ್ಸೂರೆನ್ಸ್ ಸಿಗಲಿದೆ ಎಂದರು.
PublicNext
19/09/2026 11:55 am
LOADING...