ಮೈಸೂರು: ಹೆತ್ತ ಕರುಳ ಕುಡಿಯನ್ನು ಕಳೆದುಕೊಂಡ ದುಃಖದ ನಡುವೆಯೂ, ಇತರರ ಬದುಕಿಗೆ ಬೆಳಕಾಗಲು ನಿರ್ಧರಿಸಿದ ಪೋಷಕರು ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ. ಕೆಎಸ್ಆರ್ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ (ಬ್ರೈನ್ ಡೆಡ್) 19 ವರ್ಷದ ಯುವಕನ ಅಂಗಾಂಗಗಳನ್ನು ದಾನ ಮಾಡಿ ಕುಟುಂಬಸ್ಥರು ಮಾದರಿಯಾಗಿದ್ದಾರೆ.
ಹೌದು ಮೈಸೂರು ಜಿಲ್ಲೆಯ ಮೂಡಲಹುಂಡಿ ಗ್ರಾಮದ ಶಿವಮಾದು ಮತ್ತು ಲಕ್ಷ್ಮಮ್ಮ ದಂಪತಿಯ ಏಕೈಕ ಪುತ್ರ ಭರತ್ ಕುಮಾರ್ (19) ಹಣ್ಣಿನ ವ್ಯಾಪಾರ ಮಾಡುತ್ತಾ ಕುಟುಂಬಕ್ಕೆ ಆಸರೆಯಾಗಿದ್ದ. ಸೆಪ್ಟೆಂಬರ್ 8ರ ಮಧ್ಯಾಹ್ನ ಭರತ್ ತಮ್ಮ ದ್ವಿಚಕ್ರ ವಾಹನದಲ್ಲಿ ಮೈಸೂರಿನಿಂದ ತಮ್ಮ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ, ಮೈಸೂರು-ಬನ್ನೂರು ರಸ್ತೆಯ ತಂತಿಗುಳ್ಳು ಬಳಿಯ ತಿರುವಿನಲ್ಲಿ ಮಳವಳ್ಳಿಯಿಂದ ಮೈಸೂರಿಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಭರತ್ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ತೀವ್ರ ಪೆಟ್ಟಾಗಿತ್ತು. ಸ್ಥಳೀಯರು ತಕ್ಷಣವೇ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿ ತುರ್ತು ನಿಗಾ ಘಟಕಕ್ಕೆ (ICU) ದಾಖಲಿಸಿದ್ದರು. ಮೊದಲ ದಿನವೇ ಭರತ್ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ತಿಳಿಸಿದ್ದರೂ, ಮಗ ಬದುಕಿ ಬರಬಹುದು ಎಂಬ ಆಸೆಯಿಂದ ಪೋಷಕರು ಸತತ ಒಂದು ವಾರ ಚಿಕಿತ್ಸೆ ಮುಂದುವರಿಸಿದ್ದರು.
ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಾಣದಿದ್ದಾಗ, ವೈದ್ಯರು ಮತ್ತು ಹಿತೈಷಿಗಳೊಂದಿಗೆ ಸಮಾಲೋಚಿಸಿ ಅಂಗಾಂಗ ದಾನ ಮಾಡಲು ಪೋಷಕರು ಮುಂದಾಗಿ ಮತ್ತೊಬ್ಬರಿಗೆ ಮಾದರಿಯಾಗಿದ್ದಾರೆ.
PublicNext
19/09/2026 01:22 pm
LOADING...