ಚಾಮರಾಜನಗರ : ರಾಜ್ಯದಲ್ಲಿ ಬರಗಾಲ ಆವರಿಸಿದ್ದು, ಆಹಾರ ಮತ್ತು ವಾಣಿಜ್ಯ ಬೆಳೆಗಳು ಸಂಪೂರ್ಣವಾಗಿ ಹಾಳಾಗಿರುವುದರಿಂದ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಗೌಡೇಗೌಡ ಆಗ್ರಹಿಸಿದರು.
ನಷ್ಟವಾಗಿರುವ ಆಹಾರ ಮತ್ತು ವಾಣಿಜ್ಯ ಬೆಳೆಗಳಿಗೆ ವೈಜ್ಞಾನಿಕವಾಗಿ ನಷ್ಟ ಪರಿಹಾರ ನೀಡಬೇಕು. ಬರ ಪರಿಹಾರವಾಗಿ ಎಕರೆಗೆ ₹50 ಸಾವಿರ ನಿಗದಿಪಡಿಸಬೇಕು. ಬ್ಯಾಂಕ್ ಹಾಗೂ ಫೈನಾನ್ಸ್ ಕಂಪನಿಗಳು ಕನಿಷ್ಠ ಎರಡು ವರ್ಷಗಳ ಅವಧಿಗೆ ಸಾಲ ವಸೂಲಿಗೆ ಮುಂದಾಗಬಾರದು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಕಾಡುಪ್ರಾಣಿಗಳಿಂದ ಹಾನಿಗೊಳಗಾದ ಬೆಳೆಗಳು ಹಾಗೂ ಪ್ರಾಣಹಾನಿಯಾದ ಜಾನುವಾರುಗಳಿಗೆ ವೈಜ್ಞಾನಿಕ ರೀತಿಯಲ್ಲಿ ನಷ್ಟ ಪರಿಹಾರ ನೀಡಬೇಕು. ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕಿನ ಕೆರೆಗಳಿಗೆ ಗಾಂಧಿ ಗ್ರಾಮ ಮತ್ತು ಆಲಂಬೂರು ಏತ ನೀರಾವರಿಯಿಂದ ಶೀಘ್ರವಾಗಿ ನೀರು ತುಂಬಿಸಬೇಕು ಎಂದರು.
ಹನೂರು ತಾಲೂಕಿನ ಆಲಂಬಾಡಿ, ಜಂಬುಕಾಪಟ್ಟಿ, ಪೊಂಗಾಲತ್ತೂರು ಗ್ರಾಮಗಳಿಗೆ ಕುಡಿಯುವ ನೀರು, ವಿದ್ಯುತ್ ಹಾಗೂ ರಸ್ತೆ ವ್ಯವಸ್ಥೆ ಕಲ್ಪಿಸಬೇಕು. ಕೃಷಿ ಇಲಾಖೆಯಿಂದ ಯಂತ್ರೋಪಕರಣ ಖರೀದಿಗೆ ಶೇ.90ರಷ್ಟು ಅನುದಾನವನ್ನು ಎಲ್ಲ ವರ್ಗದವರಿಗೂ ವಿಸ್ತರಿಸಬೇಕು ಎಂದು ಹೇಳಿದರು.
ಕೊಳ್ಳೇಗಾಲ ತಾಲೂಕಿನ ರೈತರಿಗೆ ಅನುಕೂಲವಾಗುವಂತೆ ನದಿ ಮೂಲದಿಂದ ನಾಲೆಗಳ ಮೂಲಕ ಎಲ್ಲ ಕೆರೆ, ಕಟ್ಟಿಗಳನ್ನು ಶೀಘ್ರವಾಗಿ ತುಂಬಿಸಬೇಕು. ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಮನು ಸೋಮಯ್ಯ, ಪ್ರಕಾಶ್, ವಿಜಯೇಂದ್ರ, ಲೋಕೇಶ್ ರಾಜ್, ರಾಜಣ್ಣ ಹಾಗೂ ದಿಲೀಪ್ ಉಪಸ್ಥಿತರಿದ್ದರು.
Kshetra Samachara
19/09/2026 04:45 pm
LOADING...