ಚಾಮರಾಜನಗರ: ಜಿಲ್ಲೆಯಲ್ಲಿ ಮನುಷ್ಯ ಮತ್ತು ಕಾಡುಪ್ರಾಣಿಗಳ ನಡುವಿನ ಸಂಘರ್ಷ ಮತ್ತೆ ಹೆಚ್ಚಾಗುತ್ತಿದೆ. ಚಾಮರಾಜನಗರ ತಾಲೂಕಿನ ಕುಮಚಹಳ್ಳಿ ಗ್ರಾಮದಲ್ಲಿ ಜಮೀನಿನಲ್ಲಿ ಮೇವು ಮೇಯುತ್ತಿದ್ದ ಹಸುವಿನ ಮೇಲೆ ಹುಲಿಯೊಂದು ಭೀಕರವಾಗಿ ದಾಳಿ ನಡೆಸಿ ಕೊಂದಿದೆ.
ಗ್ರಾಮದ ರೈತ ತಮ್ಮಣ್ಣ ಹಾಗೂ ಮಹಾದೇವ ಶೆಟ್ಟಿ ಎಂಬುವರಿಗೆ ಸೇರಿದ ಎರಡು ಹಸುಗಳ ಮೇಲೆ ದಾಳಿ ನಡೆಸಿದ ವ್ಯಾಘ್ರ, ಕತ್ತಿಗೆ ಬಾಯಿ ಹಾಕಿ ರಕ್ತ ಹೀರಿ ಕೊಂದು ಹಾಕಿದೆ. ಮತ್ತೊಂದು ಹಸುವನ್ನು ಅರ್ಧ ತಿಂದು ಹುಲಿ ಕಣ್ಮರೆಯಾಗಿದೆ.
ಈ ಘಟನೆಯಿಂದ ಗ್ರಾಮಸ್ಥರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ಕಳೆದ ಸೋಮವಾರವಷ್ಟೇ ಬಡಗಲಪುರದಲ್ಲಿ ರೈತ ಬಸವಣ್ಣ ಎಂಬುವವರನ್ನು ಕೊಂದು ತಿಂದಿದ್ದ ನರಭಕ್ಷಕ ಹುಲಿಯನ್ನು ಹಿಡಿಯಲು ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ (BRT) ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ (ಕೂಂಬಿಂಗ್) ನಡೆಸುತ್ತಿದ್ದರು.
ಆದರೆ, ಆ ಘಟನೆಯ ನೆನಪು ಮಾಸುವ ಮುನ್ನವೇ ಈ ನರಭಕ್ಷಕ ಹುಲಿಯೇ ಕುಮಚಹಳ್ಳಿಯಲ್ಲೂ ಹಸುವಿನ ಮೇಲೆ ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಬಿಆರ್ಟಿ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹುಲಿ ಉಪಟಳಕ್ಕೆ ಶೀಘ್ರವೇ ಮುಕ್ತಿ ನೀಡಬೇಕೆಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
PublicNext
19/09/2026 04:54 pm
LOADING...