ಕಾರವಾರ: ಕಾರವಾರದಲ್ಲಿ ಭಾನುವಾರದ ಸಂತೆಯ ವೇಳೆ ಇಲ್ಲಿನ ಸರ್ವಿಸ್ ರಸ್ತೆಯಲ್ಲಿ ಗ್ರಾಹಕರು ಕಾರುಗಳನ್ನು ನಿಲ್ಲಿಸುತ್ತಿದ್ದು ಅಪಘಾತಕ್ಕೆ ಆಹ್ವಾನ ನೀಡಿವಂತಾಗಿದೆ.
ನಗರದ ಕೋರ್ಟ್ ನಿಂದ ಜಿಲ್ಲಾಧಿಕಾರಿ ಕಚೇರಿಯ ವರೆಗೆ ಎಂ ರಸ್ತೆಯಲ್ಲಿ ಸಂತೆಯ ಅಂಗಡಿಗಳನ್ನು ಇಡಲು ಅವಕಾಶ ನೀಡಲಾಗಿದೆ. ಆದರೂ ಸಂತೆಯ ವೇಳೆ ಇಲ್ಲಿನ ಗಾಂಧಿ ಉದ್ಯಾನದ ಹಿಂಬದಿ ಸರ್ವಿಸ್ ರಸ್ತೆಗೆ ಹೊಂದಿಕೊಂಡು ಅಂಗಡಿಗಳನ್ನು ಹಾಕಲಾಗುತ್ತಿದೆ. ಹಣ್ಣಿನ ಅಂಗಡಿಗಳನ್ನು ರಸ್ತೆಯಲ್ಲಿ ಹಾಕುವುದರಿಂದ ಗ್ರಾಹಕರು ಕೂಡ ವಾಹನಗಳನ್ನು ರಸ್ತೆಯಲ್ಲಿಯೇ ನಿಲ್ಲಿಸುತ್ತಿದ್ದಾರೆ. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ತಡೆ ಉಂಟಾಗುತ್ತಿದೆ.
ಸರ್ವಿಸ್ ರಸ್ತೆಯಲ್ಲಿ ಕೂಡ ಕಾರುಗಳನ್ನು ಸಾಲಾಗಿ ನಿಲ್ಲಿಸಲಾಗುತ್ತಿದೆ. ಇದರಿಂದ ಅಪಘಾತಗಳಾಗುವ ಸಾಧ್ಯತೆ ಹೆಚ್ಚಿದೆ. ಸದ್ಯ ಸುರಂಗ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ನಿಷೇಧ ಇರುವ ಕಾರಣ ಕಾರವಾರದಿಂದ ಅಂಕೋಲಾದ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ೬೬ ರ ಮೇಲ್ಸೇತುವೆ ಕೂಡ ಬಂದ್ ಮಾಡಲಾಗಿದೆ. ಹೀಗಾಗಿ ಸರ್ವಿಸ್ ರಸ್ತೆಯಲ್ಲಿ ಲಾರಿಗಳು, ಬಸ್ ಹಾಗೂ ಕಾರುಗಳು ಹೆಚ್ಚಾಗಿ ಸಂಚರಿಸುತ್ತವೆ. ಆದರೆ ರಸ್ತೆಯಲ್ಲಿಯೇ ಕಾರುಗಳನ್ನು ನಿಲ್ಲಿಸುವ ಕಾರಣ ಅಪಘಾತವಾಗುವ ಸಾಧ್ಯತೆ ಇದೆ.
ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ರಸ್ತೆಯಲ್ಲಿ ಕೂಡ ಸಂತೆಗೆ ಬರುವ ಗ್ರಾಹಕರ ದ್ವಿಚಕ್ರ ವಾಹನಗಳು ಮತ್ತು ಅಂಗಡಿಕಾರರ ಪಿಕಪ್ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಸದ್ಯ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಗಳು ಅಂಗಡಿಕಾರರಿಗೆ ಸೂಚನೆ ನೀಡಿದ್ದಾರೆ. ಆದರೆ ಇಲ್ಲಿ ಅಂಗಡಿಗಳನ್ನು ಇಡಲು ಅನುಮತಿ ನೀಡಬಾರದು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Kshetra Samachara
29/06/2025 04:51 pm