ಬೆಂಗಳೂರು: ಆಡಳಿತ ಪಕ್ಷದಲ್ಲಿ ಅತೃಪ್ತಿ ಹಾಗೂ ನಾಯಕತ್ವ ಬದಲಾವಣೆ ವದಂತಿಗಳ ನಡುವೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಕೆಪಿಸಿಸಿ ಕಚೇರಿಯಲ್ಲಿ ಶಾಸಕರೊಂದಿಗೆ ವೈಯಕ್ತಿಕ ಸಭೆಗಳನ್ನು ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸುರ್ಜೇವಾಲಾ, “ನಾಯಕತ್ವ ಬದಲಾವಣೆಯ ವದಂತಿಗಳು ಕೇವಲ ಊಹಾಪೋಹ ಮಾತ್ರ, ಅದು ನಿಮ್ಮ ಕಲ್ಪನೆಯ ಫಲ. ಯಾವುದೇ ಅಧಿಕೃತ ಚರ್ಚೆಯಿಲ್ಲ," ಎಂದು ಸ್ಪಷ್ಟಪಡಿಸಿದರು.
"ಈ ಸಭೆಗಳು ನಿರಂತರ ಪ್ರಕ್ರಿಯೆಯ ಭಾಗ. ಮುಂದಿನ ಒಂದು ತಿಂಗಳು ಅಥವಾ ಒಂದೂವರೆ ತಿಂಗಳು ಈ ಮಾತುಕತೆಗಳು ನಡೆಯುತ್ತವೆ. ಈ ಅವಧಿಯಲ್ಲಿ ನಾನು ಶಾಸಕರು, ಸಂಸದರು, ಸೋತ ಅಭ್ಯರ್ಥಿಗಳು ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನ ಭೇಟಿಯಾಗುತ್ತೇನೆ. ನಂತರ ಸಿಎಂ ಮತ್ತು ಡಿಸಿಎಂ ಅವರೊಂದಿಗೆ ಅಭಿವೃದ್ಧಿ ವಿಚಾರವಾಗಿ ಸಮಾಲೋಚನೆ ಮಾಡಲಾಗುತ್ತದೆ," ಎಂದರು.
“ರಾಜ್ಯ ಸರ್ಕಾರ ಎರಡು ವರ್ಷ ಪೂರೈಸಿರುವ ಹಿನ್ನಲೆಯಲ್ಲಿ, ಶಾಸಕರಿಂದ ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳು ಹಾಗೂ ಸಂಘಟನೆ ಕಾರ್ಯವೈಖರಿಯ ಕುರಿತ ವರದಿಯನ್ನು ಪಡೆದುಕೊಳ್ಳುತ್ತಿದ್ದೇವೆ. ಇದರಿಂದ ಮುಖ್ಯಮಂತ್ರಿ ಹಾಗೂ ಸಚಿವರು ಕಾರ್ಯಕ್ಷಮತೆಯ ಪರಿಶೀಲನೆ ನಡೆಸಲು ಅನುಕೂಲವಾಗುತ್ತದೆ.”
“ಈ ಪ್ರಕ್ರಿಯೆ ಸಂಘಟನಾತ್ಮಕ ಚಟುವಟಿಕೆ ಆಗಿದ್ದು, ಎಐಸಿಸಿ ಮತ್ತು ಕೆಪಿಸಿಸಿ ಜಂಟಿಯಾಗಿ ಕೈಜೋಡಿಸಿವೆ. ಕಾಂಗ್ರೆಸ್ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಸಂಘಟನೆ ಬಲವರ್ಧನೆಗೆ ಕೆಲಸ ಮಾಡುತ್ತಿದ್ದಾರೆ. ಇಡೀ ದೇಶದಲ್ಲಿ ಕರ್ನಾಟಕ ಜನರ ಖಾತೆಗೆ ನೇರವಾಗಿ ₹52,000 ಕೋಟಿ ಹಾಕಿದೆ. ಗೃಹ ಲಕ್ಷ್ಮಿ ಯೋಜನೆಯಡಿ ವಾರ್ಷಿಕ ₹24,000 ನೇರ ವರ್ಗಾವಣೆ ಮಾಡುತ್ತಿದೆ. 4 ಕೋಟಿ ಜನರಿಗೆ ಉಚಿತ ಅಕ್ಕಿ ನೀಡುತ್ತಿದೆ. ಇದು ಬಿಜೆಪಿ ಸರ್ಕಾರ ಸೃಷ್ಟಿಸಿದ ಹಣದುಬ್ಬರಕ್ಕೆ ಪರಿಹಾರವಾಗುತ್ತಿದೆ,” ಎಂದರು.
ಇತ್ತ, ಮೈಸೂರು ನಗರದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಸುರ್ಜೇವಾಲಾ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ. ಅವರು ಶಾಸಕರ ಅಭಿಪ್ರಾಯವನ್ನು ಕೇಳುತ್ತಿದ್ದಾರೆ. ಅವರು ಸಂಘಟನೆಯ ಬಲವರ್ಧನೆಗಾಗಿ ಕ್ರಮ ಕೈಗೊಳ್ಳುತ್ತಿದ್ದಾರೆ. ಅವರು ತಮ್ಮ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ,” ಎಂದು ತಿಳಿಸಿದರು.
PublicNext
30/06/2025 07:08 pm