ಭಟ್ಕಳ: ತಾಲ್ಲೂಕಿನ ಮುಟ್ಟಳಿ–ಮುಡಭಟ್ಕಳ ಸೇರಿದಂತೆ ವಿವಿಧ ಕಡೆಗಳಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಗಳನ್ನು ಗಣೇಶೋತ್ಸವದ ಮೂರನೇ ದಿನವಾದ ಶುಕ್ರವಾರ ರಾತ್ರಿ ಭವ್ಯ ಮೆರವಣಿಗೆಯಲ್ಲಿ ತೆರಳಿ ಚೌಥನಿ ಹೊಳೆಯಲ್ಲಿ ವಿಸರ್ಜಿಸಲಾಯಿತು.
ಪ್ರತಿ ಕಡೆ ವಿಜೃಂಭಣೆಯಿಂದ ನಡೆದಿದ್ದ ಗಣೇಶೋತ್ಸವದಂತೆಯೇ ವಿಸರ್ಜನೆಯೂ ಅದ್ಧೂರಿಯಾಗಿ ನೆರವೇರಿತು. ಡಿಜೆಗಳಿಗೆ ಈ ಬಾರಿ ಅನುಮತಿ ಇರದ ಕಾರಣ, ಭಜನೆ, ಚಂಡೆಗಳು, ಡೋಲು-ವಾದ್ಯ, ನೃತ್ಯಗಳ ಸಂಭ್ರಮದಲ್ಲಿ ಗಣಪ ಮೂರ್ತಿಗಳನ್ನು ಸಾಗಿಸಿ ವಿಸರ್ಜನೆ ಮಾಡಲಾಯಿತು. ವಿಶೇಷವಾಗಿ ಭಟ್ಕಳ ಹರಿಜನ ಕೇರಿ ಗಣಪತಿ ಮೆರವಣಿಗೆಯಲ್ಲಿ ಮಹಿಳೆಯರ ನೃತ್ಯ ಹಾಗೂ ಡೋಲು ವಾದ್ಯ ಪ್ರೇಕ್ಷಕರ ಮನಸೆಳೆಯಿತು.
ತಲಾಂದ, ಹೆಬಳೆ, ಗಾಂಧಿನಗರ, ಕೌವುರ್, ಸಬ್ಬತ್ತಿ ಜ್ವಾಳ, ಜಾಲಿ, ಪುರವರ್ಗ, ಹುರುಳಿಸಾಲ, ಕಟ್ಟಗಾರ ಕೊಪ್ಪ, ಬಾಕಡ್ ಕೇರಿ, ಮೂಡಶಿರಾಲಿ ಸೇರಿದಂತೆ ಭಟ್ಕಳ-ಮುರುಡೇಶ್ವರ ವ್ಯಾಪ್ತಿಯ ಒಟ್ಟು 34 ಗಣಪ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು.
ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಡಿವೈಎಸ್ಪಿ ಮಹೇಶ್ ಎಂ.ಕೆ. ಮಾರ್ಗದರ್ಶನದಲ್ಲಿ ನಗರ ಠಾಣೆ ಸಿಪಿಐ ದಿವಾಕರ ಎಂ., ಗ್ರಾಮೀಣ ಠಾಣೆ ಸಿಪಿಐ ಮಂಜುನಾಥ ಲಿಂಗಾರೆಡ್ಡಿ ಹಾಗೂ ಮುರುಡೇಶ್ವರ ವೃತ್ತ ಸಿಪಿಐ ಸಂತೋಷ ಕಾಯ್ಕಿಣಿ ನೇತೃತ್ವದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
Kshetra Samachara
31/08/2025 07:37 am