ಚಿಕ್ಕಮಗಳೂರು: ಇಂದು ಗೋಚರಿಸಲಿರುವ ಖಗ್ರಾಸ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಕಾಫಿನಾಡ ಪ್ರಮುಖ ದೇವಸ್ಥಾನಗಳಲ್ಲಿ ರಾತ್ರಿ ಪ್ರಸಾದ ಸೇವೆಯನ್ನು ನಿಲುಗಡೆಗೊಳಿಸಲಾಗಿದೆ. ಹೊರನಾಡು ಅನ್ನಪೂರ್ಣೇಶ್ವರಿ ಹಾಗೂ ಶೃಂಗೇರಿ ಶಾರದಾಂಬೆ ದೇಗುಲದಲ್ಲಿ ರಾತ್ರಿ ಪ್ರಸಾದ ವ್ಯವಸ್ಥೆ ಇರುವುದಿಲ್ಲ. ಭಕ್ತರಿಗೆ ಮಧ್ಯಾಹ್ನದವರೆಗೆ ಮಾತ್ರ ಅನ್ನದಾನ ವ್ಯವಸ್ಥೆ ಮಾಡಲಾಗಿದೆ. ಆದರೆ, ದೇವಸ್ಥಾನಗಳಲ್ಲಿ ನಡೆಯುವ ಪೂಜೆ-ಪುನಸ್ಕಾರಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ದೇವಸ್ಥಾನ ಆಡಳಿತವು ತಿಳಿಸಿದೆ. ಜೊತೆಗೆ ಕಿಗ್ಗಾದ ಋಷ್ಯಶೃಂಗೇಶ್ವರ ಹಾಗೂ ಕಳಸದ ಈಶ್ವರನ ಸನ್ನಿಧಿಯಲ್ಲಿ ಗ್ರಹಣ ಆರಂಭದಿಂದ ಅಂತ್ಯದವರೆಗೆ ನಿರಂತರ ಜಲಾಭಿಷೇಕ ನಡೆಯಲಿದೆ. ಶೃಂಗೇರಿ ಶಾರದಾಂಬೆ ದೇಗುಲವು ಇಂದು ರಾತ್ರಿ 8:30ಕ್ಕೆ ಬಾಗಿಲು ಮುಚ್ಚಲಿದ್ದು, ನಾಳೆ ಬೆಳಗ್ಗೆ 6 ಗಂಟೆಗೆ ಪುನಃ ತೆರೆಯಲಿದೆ ಎಂದು ದೇವಸ್ಥಾನ ಮೂಲಗಳು ತಿಳಿಸಿವೆ. ಈ ಕುರಿತು ಮಾಹಿತಿ ನೀಡಿರುವ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಭೀಮೇಶ್ವರ ಜೋಷಿಯವರು ಬೆಳಗ್ಗೆ 9, ಮಧ್ಯಾಹ್ನ 1:30 ಹಾಗೂ ರಾತ್ರಿ 9 ಗಂಟೆಗೆ ಎಂದಿನಂತೆ ಮಂಗಳಾರತಿ ನಡೆಯಲಿದೆ. ಗ್ರಹಣ ಇರುವುದರಿಂದ ಮಧ್ಯಾಹ್ನ 3 ಗಂಟೆಗೆ ಪ್ರಸಾದ ಸೇವೆಯನ್ನು ನಿಲುಗಡೆಗೊಳಿಸಲಾಗುವುದು ಎಂದು ತಿಳುಸಿದ್ದಾರೆ. ಆದರೆ ದೇವಾಲಯದಲ್ಲಿ ನಡೆಯುವ ಪೂಜಾ ಕಾರ್ಯ, ಸೇವೆ, ಅರ್ಚನೆ, ದರ್ಶನ ಎಂದಿನಂತೆ ಇರಲಿದೆ ಮತ್ತು ಗ್ರಹಣದ ಸಂದರ್ಭದಲ್ಲಿ ನಡೆಯುವ ಅಭಿಷೇಕವನ್ನು ವೀಕ್ಷಿಸಲು ಅವಕಾಶ ನೀಡಲಾಗಿದೆ ಎಂದು ಧರ್ಮದರ್ಶಿಗಳು ತಿಳಿಸಿದ್ದಾರೆ.
Kshetra Samachara
07/09/2025 08:24 am