ನೆಲಮಂಗಲ: ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ತರುಣಿ ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಮತ್ತಿಬ್ಬರು ತರುಣಿಯರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಘಟನೆ ನೆಲಮಂಗಲ ತಾಲ್ಲೂಕು ರಾ.ಹೆ.48ರ ತುಮಕೂರು ರಸ್ತೆ ಕುಲವನಹಳ್ಳಿ ಗ್ರಾಮದ ಬಳಿ ನಡೆದಿದೆ.
ಗಂಡರಗೂಳಿಪುರ ಗ್ರಾಮದ ದಿವ್ಯಾ (17 ವರ್ಷ) ಅಪಘಾತದಲ್ಲಿ ಮೃತ ಪಟ್ಟಿದ್ರೆ, ಗಾಯಾಳು ಭೂಮಿಕಾ ಮತ್ತು ನಿರೀಕ್ಷಾ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂಡೇ ಟ್ರಿಪ್ ಮುಗಿಸಿ ಶಿವಗಂಗಾ ಬೆಟ್ಟಕ್ಕೆ ಹೋಗಿ ಬರ್ತಿದ್ದ ಆರು ಮಂದಿ ಸ್ನೇಹಿತರು ಮರಳಿ ನೆಲಮಂಗಲಕ್ಕೆ ವಾಪಸ್ ಮರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಘಟನೆ ಬಳಿಕ ಟಿಪ್ಪರ್ ಲಾರಿ ಸಹಿತ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
07/09/2025 08:34 pm