ಧರ್ಮಸ್ಥಳ ಗ್ರಾಮದಲ್ಲಿ ನಡೆದ ಸೌಜನ್ಯ ಹತ್ಯೆ ಪ್ರಕರಣ ಮತ್ತೊಂದು ಹೊಸ ತಿರುವು ಪಡೆದುಕೊಂಡಿದೆ. ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು, ಸೌಜನ್ಯಳ ಮಾವ ವಿಠಲ ಗೌಡ ಅವರೇ ಈ ಕೊಲೆಗೆ ಕಾರಣರಾಗಿರಬಹುದು ಎಂದು ಗಂಭೀರ ಆರೋಪ ಮಾಡಿದ್ದಾರೆ. ಪ್ರಕರಣದ ಮರುತನಿಖೆ ನಡೆಸುವಂತೆ ಒತ್ತಾಯಿಸಿ, ಅವರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ (ಎಸ್ಪಿ) ದೂರು ನೀಡಿದ್ದಾರೆ.
ಸ್ನೇಹಮಯಿ ಕೃಷ್ಣ ಅವರ ಪ್ರಕಾರ, ವಿಠಲ ಗೌಡ ಸೌಜನ್ಯಳನ್ನು ಬೇರೆಡೆ ಕೊಲೆ ಮಾಡಿ, ನಂತರ ಆಕೆಯ ದೇಹವನ್ನು ತಂದು ಎಸೆದಿರಬಹುದು. ಈ ಘಟನೆಗೆ ಸಂಬಂಧಿಸಿದಂತೆ ಸಂತೋಷ್ ರಾವ್ ಸಾಕ್ಷಿಯಾಗಿರಬಹುದೆಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ. ವಿಠಲ ಗೌಡರ ಮೇಲೆ ಮಂಪರು ಪರೀಕ್ಷೆ (ನಾರ್ಕೋ ಅನಾಲಿಸಿಸ್) ನಡೆಸಿದರೆ ಸತ್ಯ ಬಹಿರಂಗವಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಪ್ರಕರಣವನ್ನು ಹೊಸ ಆಯಾಮಗಳಲ್ಲಿ ಮರು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಸ್ನೇಹಮಯಿ ಕೃಷ್ಣ ನೀಡಿದ ಮಾಹಿತಿಯ ಪ್ರಕಾರ, ಕೊಲೆ ವೇಳೆ ಸೌಜನ್ಯಳ ಬೆನ್ನಿನಲ್ಲಿ ಬ್ಯಾಗ್ ಇತ್ತು. ಇದು ಬೇರೆ ಯಾರಾದರೂ ಅತ್ಯಾಚಾರ ಮತ್ತು ಕೊಲೆ ಮಾಡಿದ್ದರೆ ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ. ಜೊತೆಗೆ, ಕೊಲೆ ನಡೆದ ದಿನ ವಿಠಲ ಗೌಡ ತಮ್ಮ ಹೋಟೆಲ್ ಕೆಲಸಕ್ಕೆ ರಜೆ ಮಾಡಿಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಈ ಎಲ್ಲ ಸಾಂದರ್ಭಿಕ ಸಾಕ್ಷ್ಯಗಳನ್ನು ಸಮಗ್ರವಾಗಿ ಪರಿಶೀಲಿಸಿ ಮರು ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಕರಣದ ಮರು ತನಿಖೆಗೆ ನ್ಯಾಯಾಲಯವೂ ಸೂಕ್ತ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಇತ್ತೀಚೆಗೆ ಬೆಳಕಿಗೆ ಬಂದಿರುವ ಮಾಹಿತಿಗಳನ್ನು ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಸ್ನೇಹಮಯಿ ಕೃಷ್ಣ ಒತ್ತಾಯಿಸಿದ್ದಾರೆ. ಈ ಬೆಳವಣಿಗೆ ಸೌಜನ್ಯ ಕೊಲೆ ಪ್ರಕರಣಕ್ಕೆ ಮತ್ತೊಂದು ಹೊಸ ತಿರುವು ನೀಡಿದ್ದು, ರಾಜ್ಯದಾದ್ಯಂತ ಕುತೂಹಲ ಮೂಡಿಸಿದೆ.
PublicNext
08/09/2025 05:57 pm
LOADING...