ಮಂಗಳೂರು: ರಾಜ್ಯದ ಎಲ್ಲೂ ಇಲ್ಲದ ಧ್ವನಿವರ್ಧಕದ ಹೇರಿಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಏಕೆ?. ಕರಾವಳಿಯ ಸಂಸ್ಕೃತಿ, ಧಾರ್ಮಿಕತೆಗೆ ಮಾರಕವಾಗುವ ಕಾನೂನು ಬೇಡ ಎಂದು ವಿಎಚ್ಪಿ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಆಗ್ರಹಿಸಿದ್ದಾರೆ.
ವಿಎಚ್ಪಿ, ತುಳುನಾಡು ಧಾರ್ಮಿಕ ಸಾಂಸ್ಕೃತಿಕ ವೈಭವ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ಕಾನೂನಿನ ನೆಪದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳಿಗೆ ತಡೆಯೊಡ್ಡುತ್ತಿರುವ ಜಿಲ್ಲಾಡಳಿತದ ಕ್ರಮವನ್ನು ವಿರೋಧಿಸಿ ಕದ್ರಿ ಗೋರಕ್ಷನಾಥ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರಾವಳಿಯ ಹೆಚ್ಚಿನ ಕಾರ್ಯಕ್ರಮಗಳು ರಾತ್ರಿಯಿಂದ ಬೆಳಗ್ಗಿನವರೆಗೆ ನಡೆಯುತ್ತದೆ. ಹಿಂದೆ ಮೈಕ್ ಇಲ್ಲದೆ ಕಾರ್ಯಕ್ರಮ ನಡೆಯುತ್ತಿದ್ದವು ಎಂದು ಪೊಲೀಸರು ಹೇಳುತ್ತಾರೆ. ಅಂದು ಜನ ಕಡಿಮೆಯಿತ್ತು. ಆದರೆ ಇಂದು ಸಾವಿರಾರು ಮಂದಿ ಸೇರುತ್ತಾರೆ ಆಗ ಮೈಕ್ ಅಗತ್ಯವಿದೆ. ಅಷ್ಟಮಿಯಿಂದ ಬೇರೆಬೇರೆ ಕಡೆಗಳಲ್ಲಿ ಪೊಲೀಸರಿಂದ ತೊಂದರೆ ಕಾಣಿಸಿದೆ. ರಾತ್ರಿ 10 ಗಂಟೆಗೆ ಬಂದು ಪೊಲೀಸರು ನಾಟಕ, ಯಕ್ಷಗಾನ, ಇನ್ನಿತರ ಕಾರ್ಯಕ್ರಮಗಳನ್ನು ನಿಲ್ಲಿಸುತ್ತಾರೆ. ಇಡೀ ರಾಜ್ಯದಲ್ಲಿ ಎಲ್ಲೂ ಇಲ್ಲದ ಕಾನೂನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಕೆ ಎಂದು ಅವರು ಪ್ರಶ್ನಿಸಿದರು.
ಮಂಗಳೂರು ಪೊಲೀಸ್ ಕಮಿಷನರ್ ಮೇಲೆ ಗೌರವ ಇದೆ. ಕರಾವಳಿಯಲ್ಲಿ ಡ್ರಗ್ಸ್, ಮರಳು, ಮಟ್ಕಾ, ಮಸಾಜ್ ಪಾರ್ಲರ್ ದಂಧೆ ನಿಲ್ಲಿಸಲು ಅವರ ಪಾತ್ರ ಬಹಳಷ್ಟಿದೆ. ಆದರೆ ಕೋಮುಸಂಘರ್ಷ ತಡೆಯುವ ನೆಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಧ್ವನಿವರ್ಧಕ ನಿಲ್ಲಿಸೋದು ಸರಿಯಲ್ಲ. ನಾವು ನಿಮಗೆ ಸಹಕಾರ ಕೊಟ್ಟ ಕಾರಣ ದ.ಕ.ಜಿಲ್ಲೆಯಲ್ಲಿ ಶಾಂತಿ ನೆಲೆಸಿದೆ. ಪೊಲೀಸ್ ಇಲಾಖೆಯ ಕಾನೂನಿಗೆ ನಾವು ಸಹಕಾರ ಮಾಡುತ್ತೇವೆ. ಆದರೆ ನಮ್ಮ ಕಾರ್ಯಕ್ರಮಗಳಿಗೆ ನೀವು ತೊಂದರೆ ಕೊಡಬೇಡಿ ಎಂದು ಮನವಿ ಮಾಡಿದರು.
ಡಾ.ಆಶಾಜ್ಯೋತಿ ರೈಯವರು ಮಾತನಾಡಿ, ದ.ಕ.ಜಿಲ್ಲೆಯನ್ನು ಇತ್ತೀಚೆಗೆ ಅತ್ಯಂತ ಸುರಕ್ಷಿತ ನಗರ ಎಂದು ಅಂತಾರಾಷ್ಟ್ರೀಯ ಸಮೀಕ್ಷೆಯೊಂದು ವರದಿ ಮಾಡಿದೆ. ಆದರೂ ಪೊಲೀಸರಿಗೆ ಯಾವುದರ ಹೆದರಿಕೆ. ಧ್ವನಿವರ್ಧಕಗಳ ನೆಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮೇಲೆ ಹೇರಿಕೆ ಏಕೆ. ನಮ್ಮ ಬೆಳವಣಿಗೆಗೆ ಧಾರ್ಮಿಕತೆಯೂ ಅಗತ್ಯ, ಕಾನೂನು ಅಗತ್ಯ. ಒಂದು ನಾಣ್ಯಕ್ಕೆ ಎರಡು ಮುಖವಿದ್ದು, ಎರಡೂ ಅಗತ್ಯವಿದೆ. ಆದ್ದರಿಂದ ಧರ್ಮದೊಳಗೆ ಅಗತ್ಯಕ್ಕಿಂತ ಹೆಚ್ಚಿನ ಕಾನೂನು ಬೇಡ ಎಂದು ಹೇಳಿದರು.
ಕಟೀಲು ದೇವಸ್ಥಾನದ ಆನುವಂಶಿಕ ಅರ್ಚಕ ಹರಿನಾರಾಯಣ ಆಸ್ರಣ್ಣ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ರಾತ್ರಿ ಪೂರ್ತಿ ಜಾಗರಣೆಗೆ ಹೆಚ್ಚಿನ ಮಹತ್ವವಿದೆ. ಯಕ್ಷಗಾನ, ಕೋಲ, ನಾಗಮಂಡಲ ರಾತ್ರಿ ಪೂರ್ತಿ ನಡೆಯುತ್ತಿದೆ. ಒಬ್ಬೊಬ್ಬರಿಗೆ ಆಕ್ರಮಣ ಆಗುವಾಗ ನಾವು ಯಾರೂ ಮಾತನಾಡಿಲ್ಲ. ಈಗ ಎಲ್ಲರಿಗೆ ಒಟ್ಟಿಗೆ ಆಕ್ರಮಣ ಆಗಿದೆ. ಆದ್ದರಿಂದ ನಾವೆಲ್ಲರೂ ಜೊತೆ ಸೇರಿದ್ದೇವೆ. ಕೆಲ ವ್ಯವಸ್ಥೆಯಲ್ಲಿ ನಾವು ದಾರಿ ತಪ್ಪುತ್ತಿದ್ದೇವೆ. ದೇವರ ಮೆರವಣಿಗೆಯ ಹಿಂಬದಿಯಲ್ಲಿ ಇಡುವ ಡಿಜೆಗೆ ನಾವು ಕಡಿವಾಣ ಹಾಕಬೇಕಿದೆ. ಆದರೆ ಇದನ್ನೇ ನೆಪವಾಗಿರಿಸಿ ಎಲ್ಲದ್ದಕ್ಕೂ ಕಡಿವಾಣ ಹಾಕಿದರೆ ಕಷ್ಟ. ಶಾಸ್ತ್ರಕ್ಕೆ ವಿರೋಧವಾದ ಕಾನೂನು ಇರಬಾರದು. ನಮ್ಮ ನಂಬಿಕೆಗೆ ನೀವು ಕೈಹಾಕದಿರಿ ಎಂದು ಪೊಲೀಸ್ ಇಲಾಖೆಗೆ ಮನವಿ ಮಾಡಿದರು.
PublicNext
09/09/2025 05:46 pm