ವಿಶ್ವಖ್ಯಾತ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನಡೆದ ಭಾರಿ ಅವ್ಯವಸ್ಥೆಯ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಕ್ರೀಡಾ ಸಚಿವ ಅರೂಪ್ ಬಿಸ್ವಾಸ್ ಅವರು ಇಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅರೂಪ್ ಬಿಸ್ವಾಸ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.
ಲಿಯೋನೆಲ್ ಮೆಸ್ಸಿಯ ‘GOAT ಇಂಡಿಯಾ ಪ್ರವಾಸ’ದ ಅಂಗವಾಗಿ ಕೊಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಗಂಭೀರ ಅಸ್ತವ್ಯಸ್ತತೆ ಉಂಟಾಗಿತ್ತು. ಈ ಘಟನೆ ರಾಜ್ಯ ಸರ್ಕಾರದ ತೀವ್ರ ಟೀಕೆಗೆ ಗುರಿಯಾಗಿತ್ತು. ಕಾರ್ಯಕ್ರಮದ ವೇಳೆ ರಾಜಕಾರಣಿಗಳು ಮತ್ತು ವಿಐಪಿಗಳು ಮೆಸ್ಸಿಯನ್ನು ಸುತ್ತುವರೆದ ಪರಿಣಾಮ, ಸಾವಿರಾರು ರೂಪಾಯಿ ಟಿಕೆಟ್ ಖರೀದಿಸಿದ್ದ ಅಭಿಮಾನಿಗಳಿಗೆ ತಮ್ಮ ಆರಾಧ್ಯ ಆಟಗಾರನನ್ನು ಹತ್ತಿರದಿಂದ ನೋಡುವ ಅವಕಾಶ ದೊರಕಲಿಲ್ಲ.
ಇದರಿಂದ ಕೋಪಗೊಂಡ ಅಭಿಮಾನಿಗಳು ಗಲಾಟೆ ನಡೆಸಿ, ಬಾಟಲಿ ಹಾಗೂ ಕುರ್ಚಿಗಳನ್ನು ಮೈದಾನದತ್ತ ಎಸೆದ ಘಟನೆಗಳು ನಡೆದಿವೆ. ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿದ್ದಂತೆ, ಲಿಯೋನೆಲ್ ಮೆಸ್ಸಿ ನಿಗದಿತ ಸಮಯಕ್ಕಿಂತ ಮುಂಚೆಯೇ ಕೊಲ್ಕತ್ತಾವನ್ನು ತೊರೆದರು.
ಈ ಘಟನೆಗೆ ಸಂಬಂಧಿಸಿದಂತೆ ಮುಕ್ತ ಹಾಗೂ ನ್ಯಾಯಯುತ ತನಿಖೆ ನಡೆಯಲು ಅವಕಾಶ ಕಲ್ಪಿಸುವ ಉದ್ದೇಶದಿಂದಲೇ ತಾನು ರಾಜೀನಾಮೆ ನೀಡಿದ್ದಾಗಿ ಅರೂಪ್ ಬಿಸ್ವಾಸ್ ತಮ್ಮ ರಾಜೀನಾಮೆ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
PublicNext
16/12/2025 06:32 pm
LOADING...