ಮಂಗಳೂರು: ಗಾಂಜಾ ಸಾಗಾಟ ಹಾಗೂ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿಯ ವ್ಯಕ್ತಿಯೊಬ್ಬನ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಂಗಳೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಅಪರಾಧಿಗೆ 5 ವರ್ಷಗಳ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಬೆಳ್ತಂಗಡಿ ತಾಲೂಕಿನ ತೋಟತ್ತಡಿ ಗ್ರಾಮದ ತೆಕ್ಕಿಲ್ ನಿವಾಸಿ ಟಿ.ಐ. ಜೋಸೆಫ್ (59) ಶಿಕ್ಷೆಗೊಳಗಾದ ಅಪರಾಧಿ.
ಟ.ಐ.ಜೋಸೆಫ್ 2008ರ ಅಕ್ಟೋಬರ್ 11ರಂದು ಮಾರಾಟ ಮಾಡುವ ಉದ್ದೇಶದಿಂದ 2 ಕೆಜಿ 300 ಗ್ರಾಂ ಗಾಂಜಾ ಸಾಗಿಸುತ್ತಿದ್ದ. ಈ ವೇಳೆ ಬಂದರು ನೀರೇಶ್ವಾಲ್ಯ ಬಳಿ ಕರಾವಳಿ ಕಾವಲು ಪಡೆಯ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ಬಳಿಕ ನ್ಯಾಯಾಲಯದಿಂದ ಜಾಮೀನು ಪಡೆದಿದ್ದ ಜೋಸೆಫ್, ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು 16ವರ್ಷಗಳಿಂದ ತಲೆಮರೆಸಿಕೊಂಡಿದ್ದನು. ಪೊಲೀಸರು ಆತನ ಪತ್ತೆಗಾಗಿ ನಿರಂತರ ಕಾರ್ಯಾಚರಣೆ ನಡೆಸಿದ್ದು, ಅಂತಿಮವಾಗಿ 2024ರ ಫೆಬ್ರವರಿಯಲ್ಲಿ ಮತ್ತೆ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಪ್ರಕರಣದಲ್ಲಿ ಒಟ್ಟು 5ಸಾಕ್ಷಿದಾರರನ್ನು ಸರ್ಕಾರಿ ಅಭಿಯೋಜಕರು ವಿಚಾರಣೆಗೆ ಒಳಪಡಿಸಿದ್ದರು. ಒಟ್ಟು 9 ದಾಖಲೆಗಳನ್ನು ಗುರುತಿಸಿ ವಾದ ಮಂಡಿಸಿದ್ದರು. ವಿಚಾರಣೆಯನ್ನು ಆಲಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ್ ಅವರು ಆರೋಪಿ ಟಿ.ಇ ಜೋಸೆಫ್ನನ್ನು ಎನ್.ಡಿ.ಪಿ.ಎಸ್. ಕಾಯ್ದೆಯ ಕಲಂ, 8(C), 20(b)(ii)(B) ರಡಿ ದೋಷಿಯೆಂದು ತೀರ್ಪು ನೀಡಿ 5 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 50,000 ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.
Kshetra Samachara
20/12/2025 09:10 pm
LOADING...