ಜೈಪುರ : ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಎಷ್ಟು ಮುಂದುವರಿದಿದೆಯೆಂದರೆ, ಕೈಯಲ್ಲಿರುವ ಮೊಬೈಲ್ ಮೂಲಕವೇ ನಮಗೆ ಬೇಕಾದ ಯಾವುದೇ ಮಾಹಿತಿಯನ್ನು ತಕ್ಷಣಕ್ಕೆ ಪಡೆಯಬಹುದು. ಆದರೆ, ತಂತ್ರಜ್ಞಾನದ ಮೇಲಿನ ಅತಿಯಾದ ಅವಲಂಬನೆ ಕೆಲವೊಮ್ಮೆ ಎಡವಟ್ಟಿಗೆ ಕಾರಣವಾಗಿ, ಪ್ರಾಣಕ್ಕೂ ಕುತ್ತು ತರಬಹುದು. ಇಂತಹದ್ದೇ ಒಂದು ವಿಚಿತ್ರ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಗೂಗಲ್ ಮ್ಯಾಪ್ ನಂಬಿ ಪ್ರವಾಸಿಗನೊಬ್ಬ ತನ್ನ ಕಾರನ್ನು ಜೈಪುರದ ಬಿರ್ಲಾ ಮಂದಿರದ ಮೆಟ್ಟಿಲುಗಳ ಮೇಲೆ ಹತ್ತಿಸಿದ ಘಟನೆ ನಡೆದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೌದು ಗಣರಾಜ್ಯೋತ್ಸವ ದಿನದಂದು ಈ ಘಟನೆ ನಡೆದಿದ್ದು, ಅಂದು ಬಿರ್ಲಾ ಮಂದಿರದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಸೇರಿದ್ದರು. ಗೂಗಲ್ ಮ್ಯಾಪ್ ತೋರಿಸಿದ ದಿಕ್ಕಿನಲ್ಲೇ ಕಾರು ಚಲಾಯಿಸಿದ ಚಾಲಕ, ವಾಹನ ಸಂಚರಿಸುವ ರಸ್ತೆ ಮತ್ತು ಭಕ್ತರು ಓಡಾಡುವ ಮೆಟ್ಟಿಲುಗಳ ವ್ಯತ್ಯಾಸವನ್ನು ಗಮನಿಸದೆ, ತನ್ನ ಕಾರನ್ನು ನೇರವಾಗಿ ದೇವಸ್ಥಾನದ ಪ್ರವೇಶ ದ್ವಾರವನ್ನು ದಾಟಿ ಮೆಟ್ಟಿಲುಗಳ ಮೇಲೆ ಹತ್ತಿಸಿದ್ದಾನೆ. ಇದನ್ನು ಕಂಡ ಭಕ್ತರು ಕೆಲ ಕಾಲ ಆತಂಕಗೊಂಡಿದ್ದರು.
ಇನ್ನೂ ತನ್ನ ತಪ್ಪನ್ನು ಅರಿತುಕೊಂಡ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದರಿಂದ ಗಂಭೀರ ಅಪಘಾತವೊಂದು ತಪ್ಪಿಹೋಗಿದೆ. ಈ ಇಡೀ ಸನ್ನಿವೇಶವನ್ನು ಹಲವು ಭಕ್ತರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಸುಮಾರು ಎರಡು ಗಂಟೆಗಳ ಕಾಲ ಹರಸಾಹಸ ಪಟ್ಟು ಕಾರನ್ನು ಮೆಟ್ಟಿಲುಗಳಿಂದ ಕೆಳಗಿಳಿಸಿದ್ದಾರೆ. ವಿಚಾರಣೆ ವೇಳೆ, ಚಾಲಕ ತಾನು ಗೂಗಲ್ ಮ್ಯಾಪ್ ನೀಡಿದ ನಿರ್ದೇಶನಗಳನ್ನು ಅನುಸರಿಸುತ್ತಿರುವುದಾಗಿ ತಿಳಿಸಿದ್ದಾನೆ.
PublicNext
29/01/2026 06:01 pm