ಹಾಸನ: ಪ್ರೀತಿಸಿ ಮದುವೆಯಾಗಿದ್ದ ದಂಪತಿಗಳ ನಡುವಿನ ಕೌಟುಂಬಿಕ ಕಲಹ ಒಂದು ಸುಂದರ ಸಂಸಾರವನ್ನು ಬೀದಿಗೆ ತಂದಿರುವ ಘಟನೆ ಹಾಸನ ತಾಲ್ಲೂಕಿನ ಅದ್ದಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪತ್ನಿ ರಂಜಿತಾ (25) ಆತ್ಮಹತ್ಯೆಗೆ ಶರಣಾಗಿದ್ದರೆ, ಪತಿ ಚೇತನ್ (28) ಆಸ್ಪತ್ರೆಯ ಐಸಿಯುನಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಐದು ವರ್ಷಗಳ ಹಿಂದೆ ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ವಿವಾಹವಾಗಿದ್ದ ಈ ಜೋಡಿಯ ನಡುವೆ ಕಳೆದ ಕೆಲವು ಸಮಯದಿಂದ ಭಿನ್ನಾಭಿಪ್ರಾಯ ಮೂಡಿತ್ತು. ಇದರಿಂದ ಮನನೊಂದ ಚೇತನ್ ಮೂರು ದಿನಗಳ ಹಿಂದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಪ್ರಸ್ತುತ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪತಿಯ ಸ್ಥಿತಿಯನ್ನು ಕಂಡು ತೀವ್ರವಾಗಿ ನೊಂದಿದ್ದ ರಂಜಿತಾ, ನಿನ್ನೆ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಂಜಿತಾ ಮತ್ತು ಆಕೆಯ ಪೋಷಕರು ಚೇತನ್ಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಚೇತನ್ ಮತ್ತು ಅವರ ಕುಟುಂಬದವರು ವರದಕ್ಷಿಣೆಗಾಗಿ ರಂಜಿತಾಗೆ ಪೀಡಿಸುತ್ತಿದ್ದರು ಎಂದು ಪ್ರತಿದೂರು ನೀಡಿದ್ದಾರೆ. ಈ ದಂಪತಿಗೆ ಒಂದು ಪುಟ್ಟ ಮಗುವಿದ್ದು, ತಾಯಿ ಸಾವು ಹಾಗೂ ತಂದೆ ಆಸ್ಪತ್ರೆ ಪಾಲಾಗಿರುವುದರಿಂದ ಮಗು ಅನಾಥವಾಗಿದೆ. ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
PublicNext
30/01/2026 04:56 pm
LOADING...