ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮುರಗುಂಡಿ ಗ್ರಾಮದ ಅಗ್ರಾಣಿ ಹಳ್ಳದಲ್ಲಿ ಮೊಸಳೆ ಹಾವಳಿ ಮುಂದುವರಿದಿದ್ದು, ಗ್ರಾಮಸ್ಥರಲ್ಲಿ ತೀವ್ರ ಆತಂಕ ಮನೆ ಮಾಡಿದೆ. ಕಳೆದ ಹಲವು ದಿನಗಳಿಂದ ಹಳ್ಳದ ನೀರಿನಲ್ಲಿ ಮೊಸಳೆ ಓಡಾಡುತ್ತಿರುವುದು ಕಂಡುಬಂದಿದ್ದು, ಇತ್ತೀಚೆಗೆ ಸಂಜೆ ನೀರು ಕುಡಿಯಲು ತೆರಳಿದ್ದ ಎರಡು ಕುರಿಗಳನ್ನು ಮೊಸಳೆ ಎಳೆದೊಯ್ದು ತಿಂದು ಹಾಕಿದೆ. ಮೊಸಳೆ ಹಾವಳಿಯಿಂದಾಗಿ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಸಮಯದಲ್ಲಾದರೂ ಮಾನವ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ.
ಆತಂಕ ಹೆಚ್ಚಿಸಿದ ದೃಶ್ಯಗಳು
ಮೊಸಳೆ ಓಡಾಟ ಹಾಗೂ ಕುರಿಗಳನ್ನು ಎಳೆದೊಯ್ಯುತ್ತಿರುವ ದೃಶ್ಯಗಳು ಸ್ಥಳೀಯರ ಮೊಬೈಲ್ಗಳಲ್ಲಿ ಸೆರೆಯಾಗಿದ್ದು, ಈ ವಿಡಿಯೋಗಳು ಗ್ರಾಮಸ್ಥರ ಆತಂಕವನ್ನು ಮತ್ತಷ್ಟು ಹೆಚ್ಚಿಸಿವೆ. ಹಳ್ಳದ ಸುತ್ತಮುತ್ತ ಕೃಷಿ ಕಾರ್ಯ ಮತ್ತು ಪಶು ಸಾಕಾಣಿಕೆ ನಡೆಸುತ್ತಿರುವ ರೈತರು ಹಾಗೂ ಗ್ರಾಮಸ್ಥರು ಪ್ರತಿದಿನ ಭಯಭೀತ ಸ್ಥಿತಿಯಲ್ಲಿ ದಿನ ಕಳೆಯುವಂತಾಗಿದೆ. ಮೊಸಳೆ ದಾಳಿ ಭೀತಿಯಿಂದಾಗಿ ಹಳ್ಳದ ಬಳಿ ತೆರಳಲು ಜನ ಹಿಂಜರಿಯುತ್ತಿದ್ದಾರೆ.
ಅರಣ್ಯ ಇಲಾಖೆಗೆ ಗ್ರಾಮಸ್ಥರ ಆಗ್ರಹ
ಕೂಡಲೇ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಮೊಸಳೆಯನ್ನು ಸೆರೆಹಿಡಿದು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಮಾನವ ಜೀವಕ್ಕೆ ಸಂಭವಿಸಬಹುದಾದ ಅಪಾಯವನ್ನು ತಡೆಯಲು ತುರ್ತು ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.
PublicNext
30/01/2026 08:35 pm
LOADING...