ಚಿತ್ರದುರ್ಗ: ಅಲೆಮಾರಿ ಸಮುದಾಯದಂತಹ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉಚಿತವಾಗಿ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ ಅವರು ತಿಳಿಸಿದರು.
ಚಿತ್ರದುರ್ಗ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ವಿಮುಕ್ತಿ ವಿದ್ಯಾಸಂಸ್ಥೆ ದಮ್ಮ ಕೇಂದ್ರದ ಸಹಯೋಗದಲ್ಲಿ ನಗರದ ಮೆದೇಹಳ್ಳಿ, ಮಾಳಪ್ಪನಹಟ್ಟಿ ಹಾಗೂ ದಾವಣಗೆರೆ ರಸ್ತೆಯ ಸಮೀಪ ವಾಸವಿರುವ ಸುಡುಗಾಡು ಸಿದ್ದ ಅಲೆಮಾರಿಗಳ ಕುಟುಂಬಗಳಿಗಾಗಿ ಈಚೆಗೆ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಅಲೆಮಾರಿ ಕುಟುಂಬದವರು ಶಿಬಿರದ ಸದುಪಯೋಗ ಪಡೆದುಕೊಂಡು ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಬೇಕು ಎಂದು ಕರೆ ನೀಡಿದರು.
ಟೆಂಟ್ಗಳಲ್ಲಿ ವಾಸವಿರುವ ಕುಟುಂಬಗಳು ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತೆ ವಹಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಿ, ಬಿಸಿಯಾದ ಆಹಾರ ಹಾಗೂ ಪೌಷ್ಟಿಕ ಆಹಾರ ಸೇವಿಸಬೇಕು. ಮಕ್ಕಳಿಗೆ ಸಕಾಲಕ್ಕೆ ಲಸಿಕೆ ಕೊಡಿಸುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ತುರ್ತು ಸಂದರ್ಭಗಳಲ್ಲಿ ತಡಮಾಡದೆ 108 ಸೇವೆ ಪಡೆಯಬೇಕು ಎಂದು ಕಿವಿಮಾತು ಹೇಳಿದರು.
ನಮ್ಮ ಕ್ಲಿನಿಕ್ ವೈದ್ಯಾಧಿಕಾರಿ ಡಾ. ಅಕ್ಷತಾ ಮತ್ತು ತಂಡದವರು 49 ಜನರಿಗೆ ಅಸಾಂಕ್ರಾಮಿಕ ರೋಗಗಳ ಪರೀಕ್ಷೆ ನಡೆಸಿದರು. ಪರೀಕ್ಷೆಯ ವೇಳೆ ಹೊಸದಾಗಿ ಇಬ್ಬರಿಗೆ ರಕ್ತದೊತ್ತಡ ಹಾಗೂ ಮೂವರಿಗೆ ಮಧುಮೇಹ ಇರುವುದು ಪತ್ತೆಯಾಗಿದ್ದು, ಚಿಕಿತ್ಸೆ ಆರಂಭಿಸಲಾಗಿದೆ. ಈಗಾಗಲೇ ಅನಾರೋಗ್ಯ ಹೊಂದಿರುವ 15 ಜನರಿಗೆ ಅಗತ್ಯ ಔಷಧಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಿಮುಕ್ತಿ ವಿದ್ಯಾಸಂಸ್ಥೆಯ ಅಧ್ಯಕ್ಷೆ ಅನ್ನಪೂರ್ಣ, ಪದಾಧಿಕಾರಿಗಳಾದ ಬಿಬಿಜಾನ್, ನಾಗರತ್ನ, ನಿರ್ದೇಶಕ ವಿಶ್ವಸಾಗರ, ಹೆಚ್.ಐ.ಒ ಪ್ರವೀಣ್ ಕುಮಾರ್, ಕ್ಯಾಸಾಪುರ ಸಿ.ಎಚ್.ಒ ಹಿಮಬಿಂದು ಹಾಗೂ ಸುಡುಗಾಡು ಸಿದ್ದ ಸಮುದಾಯದ ಮುಖಂಡರಾದ ಬಾಬಣ್ಣ, ವಸಂತಿ, ಗಂಗಜ್ಜ, ಆಶಾ ಮೆಂಟರ್ ತಬಿತಾ, ಆಶಾ ಕಾರ್ಯಕರ್ತೆ ಜ್ಯೋತಿ, ಅಲೆಮಾರಿ ಜನಾಂಗದವರು ಇದ್ದರು.
Kshetra Samachara
02/02/2026 04:23 pm