ಬೆಳಗಾವಿ : ಸವದತ್ತಿ ತಾಲೂಕಿನ ಅವರಾಧಿ ಗ್ರಾಮದಲ್ಲಿರುವ ಮುದ್ದೂರಮ್ಮ ಮತ್ತು ಶ್ರೀ ಶೆಟ್ಟೆಮ್ಮ ದೇವಿ ದೇವಸ್ಥಾನದಲ್ಲಿ ನಡೆದ ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ದೇವಸ್ಥಾನದ ಬಾಗಿಲ ಕೀಲಿ ಮುರಿದು ದೇವರ ಮೂರ್ತಿಯ ಮೇಲಿದ್ದ ಸುಮಾರು 90,000 ರೂ. ಮೌಲ್ಯದ ಬಂಗಾರದ ಆಭರಣಗಳನ್ನು ಕಳವು ಮಾಡಲಾಗಿತ್ತು. ಈ ಕಳ್ಳತನದ ಕುರಿತು ಕುಲಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ವಿವರ
ಪ್ರಕರಣದ ತನಿಖೆ ಕೈಗೊಂಡ ಕುಲಗೋಡ ಪೊಲೀಸರು, ಭೀರಪ್ಪ ಹನಮಂತಪ್ಪ ಕತ್ತಿ (36), ಬಸವರಾಜ ಭೀಮಪ್ಪ ತಳವಾರ (35), ಬರಮಪ್ಪ ಸಂಗಪ್ಪ ಲಗಳಿ (39) ಹಾಗೂ ವಿಲಾಸ ಲಕ್ಷ್ಮಣ ರಸಾಳ (34) ಎಂಬ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಹು ಪ್ರಕರಣಗಳ ಭೇದನೆ ಮತ್ತು ವಶಪಡಿಸಿಕೊಂಡ ಆಭರಣಗಳು
ಬಂಧಿತ ಆರೋಪಿಗಳಿಂದ ಕೇವಲ ಅವರಾಧಿ ದೇವಸ್ಥಾನದ ಪ್ರಕರಣ ಮಾತ್ರವಲ್ಲದೆ, ಮುರಗೋಡ ಮತ್ತು ಸವದತ್ತಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಇತರೆ ಮೂರು ದೇವಸ್ಥಾನ ಕಳ್ಳತನ ಪ್ರಕರಣಗಳ ಆಭರಣಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ, ಕುಲಗೋಡ, ಮುರಗೋಡ ಮತ್ತು ಸವದತ್ತಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ನಾಲ್ಕು ದೇವಸ್ಥಾನ ಕಳ್ಳತನ ಪ್ರಕರಣಗಳನ್ನು ಭೇದಿಸಿ, ಸುಮಾರು 4.34 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
ಕಳ್ಳತನ ಕೃತ್ಯಗಳಿಗೆ ಬಳಸಲಾಗಿದ್ದ 3 ಲಕ್ಷ ರೂ. ಮೌಲ್ಯದ 5 ಬೈಕ್ಗಳು ಮತ್ತು 1.50 ಲಕ್ಷ ರೂ. ಮೌಲ್ಯದ ಒಂದು ಕಾರನ್ನು ಸಹ ಪೊಲೀಸರು ಜಪ್ತಿ ಮಾಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಒಟ್ಟು 8.84 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು, ನಾಲ್ವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
PublicNext
03/02/2026 07:41 pm
LOADING...