ನಂಜನಗೂಡು: ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಖದೀಮರನ್ನು ಕವಲಂದೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳವು ಮಾಡಿದ್ದ 2.28 ಲಕ್ಷ ನಗದು ಹಾಗೂ 22 ಗ್ರಾಂ ಚಿನ್ನದ ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ.
ತಗಡೂರು ಗ್ರಾಮದ ಟಿ.ಬಿ.ರಾಜು ಹಾಗೂ ಟಿ.ಡಿ.ಅಭಿಷೇಕ್ ಬಂಧಿತರು. ಕವಲಂದೆ ಠಾಣಾ ವ್ಯಾಪ್ತಿಯ ತಗಡೂರು ಗ್ರಾಮದ ನಿವಾಸಿ ಪ್ರೇಮ ಅವರ ಮನೆಯಲ್ಲಿ ಫೆಬ್ರವರಿ 16ರಂದು ಈ ಇಬ್ಬರು ಕಳ್ಳತನ ಮಾಡಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಲ್ಲಿಕ್, ಎಲ್. ನಾಗೇಶ್ ಅವರ ಮಾರ್ಗದರ್ಶನದಲ್ಲಿ ನಂಜನಗೂಡು ಉಪವಿಭಾಗದ ಡಿವೈಎಸ್ಪಿ ಜಿ.ಎಸ್.ರಘು, ಬಿಳಿಗೆರೆ ವೃತ್ತ ನಿರೀಕ್ಷಕ ಚಂದ್ರಶೇಖರ್, ಬಿಳಿಗೆರೆ ಪ್ರಭಾರ ವೃತ್ತ ನಿರೀಕ್ಷಕ ಆನಂದ, ಕವಲಂದೆ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜು, ರಮೇಶ್ ಅವರ ನೇತೃತ್ವದಲ್ಲಿ ಈ ಕಳ್ಳರನ್ನು ಪತ್ತೆ ಮಾಡಿ ಕಳವು ಮಾಡಿದ್ದ ನಗದು, ಚಿನ್ನಾಭರಣ ವಶಪಡಿಸಿಕೊಳ್ಳಲಾಯಿತು.
ಅಂದು ಪ್ರೇಮ ಅವರು ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಅವರ ಮನೆಗೆ ಕನ್ನ ಹಾಕಿದ್ದ ಈ ಇಬ್ಬರು ಖದೀಮರು, 22 ಗ್ರಾಂ ಚಿನ್ನಾಭರಣ ಮತ್ತು ನಗದು ಹಣವನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಕವಲಂದೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ನ್ಯಾಯಾಲಯದ ಆದೇಶದ ಮೇರೆಗೆ ಈ ಇಬ್ಬರನ್ನು ನಂಜನಗೂಡು ತಾಲ್ಲೂಕು ಉಪಕಾರಾಗೃಹಕ್ಕೆ ಒಪ್ಪಿಸಲಾಗಿದೆ. ಈ ಸಂಬಂಧ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
05/03/2026 04:52 pm
LOADING...