ಪೊನ್ನಂಪೇಟೆ: ಆಕಸ್ಮಿಕವಾಗಿ ಕೆರೆಗೆ ಬಿದ್ದ ಮಗ, ಕೆರೆಗೆ ಬಿದ್ದ ಮಗನನ್ನು ರಕ್ಷಿಸಲು ಕೆರೆಗೆ ಇಳಿದ ತಂದೆ ಇಬ್ಬರೂ ನೀರಿನಲ್ಲಿ ಮುಳುಗಿ ದಾರುಣ ಸಾವಿಗೀಡಾದ ಹೃದಯ ವಿದ್ರಾವಕ ಘಟನೆಯೊಂದು ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಚಿಕ್ಕಮುಂಡೂರು ಗ್ರಾಮದಲ್ಲಿ ನಡೆದಿದೆ.
ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಥಮಿಕ ವಿಭಾಗದಲ್ಲಿ 2 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಜೆ. ಕೆ. ಕೆಂಚ(8) ಹಾಗೂ ಆತನ ತಂದೆ ಜೇನುಕುರುಬರ ಶಿವಣ್ಣ(40) ಎಂಬವರೇ ಮೃತ ದುರ್ದೈವಿಗಳು. ಚಿಕ್ಕಮುಂಡೂರು ಗ್ರಾಮದ ಜಾಲಿ ಪೂವಯ್ಯ ಎಂಬವರ ಲೈನ್ ಮನೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದ ಇವರು ಕುಟುಂಬದವರೊಂದಿಗೆ ಕೆರೆಗೆ ತೆರಳಿದ್ದರು. ಕೆರೆಯ ಬಳಿಯೇ ಸ್ನಾನ ಮಾಡಿಕೊಂಡು ಆಟವಾಡಿಕೊಂಡಿದ್ದ ಬಾಲಕ ಕೆಂಚ ಆಕಸ್ಮಿಕವಾಗಿ ಕೆರೆಗೆ ಬಿದ್ದಿದ್ದಾನೆ.
ಮಗ ಕೆರೆಗೆ ಬಿದ್ದಿರುವುದನ್ನು ಗಮನಿಸಿದ ತಂದೆ ಶಿವಣ್ಣ ಮಗನನ್ನು ರಕ್ಷಿಸುವ ಸಲುವಾಗಿ ನೀರಿಗೆ ಇಳಿದಿದ್ದಾರೆ. ಆದರೆ ಕೆರೆಯಲ್ಲಿ ಹೂಳು ಇದ್ದ ಕಾರಣ ದುರದೃಷ್ಟವಶಾತ್ ನೀರಿನಿಂದ ಹೊರಬರಲಾಗದೆ, ತಂದೆ ಮಗ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ತನ್ನ ಕಣ್ಣೆದುರಿನಲ್ಲೇ ಗಂಡ ಹಾಗೂ ಮಗನನ್ನು ಕಳೆದುಕೊಂಡ ಶಿವಣ್ಣ ಅವರ ಪತ್ನಿ ಸುಮತಿ ತನ್ನ ಇನ್ನಿಬ್ಬರು ಪುಟ್ಟ ಮಕ್ಕಳೊಂದಿಗೆ ರೋಧಿಸುತಿದ್ದ ದೃಶ್ಯ ಹಾಗೂ, ಮಗ ಮೊಮ್ಮಗನನ್ನು ಕಳೆದುಕೊಂಡ ಶಿವಣ್ಣ ಅವರ ತಾಯಿ ಹಾಗೂ ಕುಟುಂಬದವರ ಆಕ್ರಂದನ ಕರುಳು ಹಿಂಡುವಂತಿತ್ತು. ಈ ಬಗ್ಗೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಕುಟ್ಟ ವೃತ್ತ ನಿರೀಕ್ಷಕ ಶಿವರುದ್ರಪ್ಪ ಹಾಗೂ ಶ್ರೀಮಂಗಲ ಠಾಣಾಧಿಕಾರಿ ರವೀಂದ್ರ ಭೇಟಿ ನೀಡಿ ಪರಿಶೀಲಿಸಿ, ಮುಂದಿನ ಕ್ರಮ ಕೈಗೊಂಡರು.
Kshetra Samachara
11/03/2026 07:23 am
LOADING...