ನಾಪೋಕ್ಲು : ರಸ್ತೆ ಬದಿ ತೆರಳುತ್ತಿದ್ದ ಪಾದಾಚಾರಿ ತಾಯಿ ಮಗಳಿಗೆ ಕಾರು ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ನಾಪೋಕ್ಲು ವಿರಾಜಪೇಟೆ ತೆರಳುವ ಮುಖ್ಯರಸ್ತೆಯ ಬೇತು ಗ್ರಾಮದಲ್ಲಿ ನಡೆದಿದೆ.
ಪಾಲೂರು ಗ್ರಾಮದ ನಿವಾಸಿಗಳಾದ ಪಿ.ಎಂ.ನೀಲ ಹಾಗೂ ಪುತ್ರಿ ಮೋಕ್ಷಿತ ಎಂಬುವವರು ನಾಪೋಕ್ಲು ಪಟ್ಟಣದಿಂದ ಬೇತು ಗ್ರಾಮದಲ್ಲಿ ನಡೆಯಲಿರುವ ಸಂಘದ ಸಭೆಯಲ್ಲಿ ಭಾಗವಹಿಸಲು ಬೇತು ರಸ್ತೆ ಬದಿಯ ಮೂಲಕ ತೆರಳುತ್ತಿರುವ ಸಂದರ್ಭ ವಿರಾಜಪೇಟೆ ಕಡೆಯಿಂದ ಇದೇ ರಸ್ತೆಯ ಮಾರ್ಗದಲ್ಲಿ ಎಮ್ಮೆಮಾಡು ಗ್ರಾಮದ ನಿವಾಸಿ ಜಂಶೀರ್ ಎಂಬುವವರು ಚಲಾಯಿಸುತ್ತಿದ್ದ ಮಾರುತಿ ಸೆಲೇರಿಯೋ ಕಾರು ಡಿಕ್ಕಿಯಾಗಿದೆ.
ಅಪಘಾತದ ರಭಸಕ್ಕೆ ತಾಯಿ ಮಗಳು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಸ್ವರೂಪದ ಗಾಯಗಳಾಗಿವೆ. ಗಾಯಾಳುವಿಗೆ ನಾಪೋಕ್ಲು ಸಮುದಾಯ ಅರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.ಸ್ಥಳಕ್ಕೆ ನಾಪೋಕ್ಲು ಪೊಲೀಸರು ಭೇಟಿ ನೀಡಿ ಕಾರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವಿಪರ್ಯಾಸವೆಂದರೆ ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಂಬುಲೆನ್ಸ್ ಇದ್ದು ಚಾಲಕನಿಲ್ಲದೆ ಗಾಯಾಳುಗಳನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಲು ಪರದಾಡಿದ ಘಟನೆ ನಡೆಯಿತು. ಬಳಿಕ ವಿರಾಜಪೇಟೆಯಿಂದ ಆಂಬುಲೆನ್ಸ್ ಕರೆಸಿ ಗಾಯಾಳುಗಳನ್ನು ತಡವಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ಸೇವೆ ಇಲ್ಲದ ಕಾರಣ ಜನರು ಆಕ್ರೋಶ ವ್ಯಕ್ತಪಡಿಸಿದ್ದು ಸಂಬಂಧಪಟ್ಟ ಜಿಲ್ಲಾ ಆರೋಗ್ಯ ಇಲಾಖೆಯವರು ಕೂಡಲೇ ಎಚ್ಚೆತ್ತುಕೊಂಡು ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ಆಂಬುಲೆನ್ಸ್ ಗೆ ದಿನದ 24 ಗಂಟೆ ಸೇವೆಗೆ ಇಬ್ಬರು ಚಾಲಕರನ್ನು ನೇಮಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
PublicNext
17/03/2026 09:09 pm