ಬೆಳಗಾವಿ: ಬೆಳಗಾವಿಯ ಪೌರಕಾರ್ಮಿಕರಿಗೆ ನೀಡಲಾಗುತ್ತಿರುವ ಆಹಾರದಲ್ಲಿ ಭಾರಿ ಅವ್ಯವಸ್ಥೆ ಕಂಡುಬಂದಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಾರ್ಮಿಕರ ಆರೋಗ್ಯದ ಜೊತೆ ಚೆಲ್ಲಾಟವಾಡಲಾಗುತ್ತಿದ್ದು, ಕುದಿಸಿದ ಮೊಟ್ಟೆಗಳು ಹಳದಿ ಬಣ್ಣಕ್ಕೆ ತಿರುಗಿರುವುದು ಆತಂಕ ಮೂಡಿಸಿದೆ.
ಬೆಳಗಾವಿ ನಗರದ ಚವ್ಹಾಟ್ ಗಲ್ಲಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 69 ಪೌರಕಾರ್ಮಿಕರಿಗೆ ಪೂರೈಸಲಾದ ಆಹಾರವು ಪಶುಗಳೂ ಸಹ ತಿನ್ನಲಾಗದಷ್ಟು ಕಳಪೆಯಾಗಿದೆ. ಸರಬರಾಜಾದ ಮೊಟ್ಟೆಗಳನ್ನು ಕುದಿಸಿದಾಗ ಅವು ಸಂಪೂರ್ಣ ಹಳದಿ ಬಣ್ಣಕ್ಕೆ ತಿರುಗಿದ್ದು, ಕಾರ್ಮಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಗಲಿರುಳು ನಗರದ ಸ್ವಚ್ಛತೆಗಾಗಿ ಶ್ರಮಿಸುವ ಕಾರ್ಮಿಕರಿಗೆ ಪೌಷ್ಟಿಕ ಆಹಾರ ನೀಡುವ ಬದಲಾಗಿ, ವಿಷಪೂರಿತ ಎನ್ನಲಾಗುವ ಇಂತಹ ಆಹಾರ ನೀಡಿರುವುದು ಮಹಾನಗರ ಪಾಲಿಕೆಯ ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಈ ಬಗ್ಗೆ ಸರಬರಾಜುದಾರನನ್ನು ಪ್ರಶ್ನಿಸಿದರೆ, "ಒಲೆಯ ಮೇಲೆ ಹೆಚ್ಚು ಹೊತ್ತು ಕುದಿಸಿದ್ದರಿಂದ ಮೊಟ್ಟೆ ಹಳದಿಯಾಗಿದೆ" ಎಂಬ ಬಾಲಿಶ ಸಮರ್ಥನೆ ನೀಡುತ್ತಿದ್ದಾನೆ. ಆದರೆ ಅಧಿಕಾರಿಗಳ ಮೌನ ಮತ್ತು ನಿರ್ಲಕ್ಷ್ಯವೇ ಈ ಕಳಪೆ ಆಹಾರ ಸರಬರಾಜಿಗೆ ಕಾರಣ ಎಂದು ಕಾರ್ಮಿಕರು ಆರೋಪಿಸುತ್ತಿದ್ದಾರೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಮತ್ತು ಗುಣಮಟ್ಟದ ಆಹಾರ ಪೂರೈಸಬೇಕು ಎಂದು ಪೌರಕಾರ್ಮಿಕರು ಪಟ್ಟು ಹಿಡಿದಿದ್ದಾರೆ.
PublicNext
15/03/2026 02:17 pm
LOADING...