ಹಂಪಿ : ಕನ್ನಡ ನಾಡು, ನುಡಿಯ ಸಂಶೋಧನೆಗೆ ಜನ್ಮ ತಾಳಿರೋ ಹಂಪಿ ಕನ್ನಡ ವಿವಿಯ ಹೊರಗುತ್ತಿಗೆ ನೌಕರರಿಗೆ 11 ತಿಂಗಳ ಸಂಬಳವಿಲ್ಲ, ಸಂಬಳವಿಲ್ಲದೇ ಬದುಕು ಬೀದಿಗೆ ಬಂದು ಬೀಳೋ ಸ್ಥಿತಿ ಎದುರಾಗಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕಳೆದ 24 ವರ್ಷಗಳಿಂದ ಭದ್ರತಾ ಸಿಬ್ಬಂದಿ ಹಾಗೂ ಸ್ವಚ್ಛತಾ ಸಿಬ್ಬಂದಿಗಳಾಗಿ 48 ಜನ ದುಡಿಯುತ್ತಿದ್ದಾರೆ. ಮೊದಲು ದಿನಗೂಲಿ ನೌಕರರಾಗಿ ನಂತರ ಹೊರ ಗುತ್ತಿಗೆ ನೌಕರರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
48 ಹೊರ ಗುತ್ತಿಗೆ ನೌಕರರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಕಡು ಬಡವರಾಗಿದ್ದಾರೆ.
22 ಜನ ಮಹಿಳಾ ಸ್ವಚ್ಛತಾಗಾರರು ಕಡುಬಡತನದಲ್ಲಿ ಜೀವಿಸುತ್ತಿದ್ದಾರೆ. ಕನ್ನಡ ವಿಶ್ವವಿದ್ಯಾಲಯಕ್ಕಾಗಿ ನೂರಾರು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ಭೂಮಿಯನ್ನು ಕೆಲವರು ಉಚಿತವಾಗಿ ಹಾಗೂ ಕೆಲವರು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ. ಈಗ ಜೀವನ ನಡೆಸಲು ಇವರಿಗೆ ವೇತನ ನೀಡಿಲ್ಲ. ಇವರಿಗೆ ನೌಕರಿಯ ಭದ್ರತೆ ಇಲ್ಲ. ಕಾನೂನು ಪ್ರಕಾರ ಇವರಿಗೆ ಯಾವುದೇ ಸೌಲಭ್ಯಗಳು ಇಲ್ಲ. ರಾತ್ರಿ ಪಾಳಯದಲ್ಲಿ ಕೆಲಸ ಮಾಡುವ ಗುತ್ತಿಗೆ ನೌಕರರ ಪ್ರಾಣಕ್ಕೆ ರಕ್ಷಣೆ ಕೂಡ ಇಲ್ಲ. ಅಲ್ಲದೆ ಕಳೆದ 2024 ರಲ್ಲಿ ಗುತ್ತಿಗೆ ನೌಕರ ನಾಯಕರ ನಂದೆಪ್ಪ, ವೇತನ ಇಲ್ಲದೆ ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗದೆ ಸಾವನ್ನಪ್ಪಿದ್ದಾನೆ.
ಆದರೆ ಈವರೆಗೆ ಆತನಿಗೆ ಕವಿವಿಯಿಂದ ಹಾಗೂ ಸರ್ಕಾರದಿಂದ ಯಾವುದೇ ಪರಿಹಾರ ದೊರೆತಿಲ್ಲ.
ಈ ಕುರಿತು ರಾಜ್ಯಪಾಲರು, ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ಸೇರಿದಂತೆ ಕುಲಪತಿಗಳಿಗೆ ಮನವಿಪತ್ರ ಸಲ್ಲಿಸಿದರೂ, ನಮ್ಮ ಮನವಿಗೆ ಸ್ಪಂದಿಸಿ ವೇತನ ಬಿಡುಗಡೆ ಮಾಡದ ಹಿನ್ನಲೆಯಲ್ಲಿ ಕನ್ನಡ ವಿಶ್ವವಿದ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದು ಅನಿವಾರ್ಯ ಅಂತಾರೆ ಹೋರಾಟಗಾರರು.
ಕವಿವಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 48 ಜನ ಹೊರ ಗುತ್ತಿಗೆ ನೌಕರರಿಗೆ ತಕ್ಷಣ 11 ತಿಂಗಳ ಬಾಕಿ ವೇತನ ಪಾವತಿ ಮಾಡಬೇಕು. ವೇತನವಿಲ್ಲದೆ ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗದೆ ಸಾವನ್ನಪ್ಪಿದ ನಾಯಕರ ನಂದೆಪ್ಪ ಕುಟುಂಬಕ್ಕೆ 20 ಲಕ್ಷ ಪರಿಹಾರ ನೀಡಬೇಕು. ಕಳೆದ 24 ವರ್ಷಗಳಿಂದ ಹೊರ ಗುತ್ತಿಗೆ ನೌಕರರಾಗಿ ದುಡಿಯುತ್ತಿರುವ 48 ಜನ ನೌಕರರ ಸೇವೆಯನ್ನು ಖಾಯಂ ಮಾಡಬೇಕು. ನೌಕರರಿಗೆ ವಂಚನೆ ಮಾಡಿರುವ ಕೌಶಲ್ಯ ಸೆಕ್ಯೂರಿಟಿ ಸರ್ವೀಸ್ ಹಾಗೂ ಕವನ ಪಾಟೀಲ್ ಸೆಕ್ಯೂರಿಟಿ ಸರ್ವಿಸ್ ಕಂಪನಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ ನೌಕರರು.
ಪಾಂಡು ಜಂತ್ಲಿ ಪಬ್ಲಿಕ್ ನೆಕ್ಸ್ಟ್ ವಿಜಯನಗರ
PublicNext
18/03/2026 07:52 pm