ಶಿವಮೊಗ್ಗ : ಆಕೆಯದ್ದು ಬಾಳಿ ಬದುಕಬೇಕಾದ ವಯಸ್ಸು. ಇತ್ತೀಚೆಗಷ್ಟೇ ಪದವಿ ಮುಗಿಸಿದ್ದ ಆಕೆ ಭವಿಷ್ಯದ ದಿನಗಳಿಗೆ ಪೂರಕವಾದ ತರಬೇತಿಯನ್ನು ಪಡೆಯುತ್ತಿದ್ದಳು. ಮೂಕ ಪ್ರಾಣಿಗಳ ಸೇವೆಯ ಕನಸು ಕಂಡಿದ್ದ ಆಕೆಯ ಬದುಕು ಪ್ರಾಣಿಯ ದಾಳಿಯಲ್ಲಿ ಕೊನೆಗೊಂಡಿದೆ. ಕತ್ತಲ ಪರಿಸರದಲ್ಲಿ ನಡೆದ ಈ ಘಟನೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಚಿತ್ರದಲ್ಲಿ ಕಾಣುತ್ತಿರುವ ಈಕೆ ಡಾಕ್ಟರ್ ಸಮೀಕ್ಷಾ ರೆಡ್ಡಿ. 23 ವರ್ಷದ ಬೆಂಗಳೂರು ಮೂಲದ ಈ ಯುವ ವೈದ್ಯೆ. ಇತ್ತೀಚೆಗಷ್ಟೇ ಶಿವಮೊಗ್ಗದ ತಾವರೆ ಕೊಪ್ಪದಲ್ಲಿರುವ ಹುಲಿ ಸಿಂಹ ಧಾಮದಲ್ಲಿ ತರಬೇತಿಗೆ ಆಯ್ಕೆಯಾಗಿದ್ದಳು.
ಕಳೆದ ತಿಂಗಳಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದ ಡಾಕ್ಟರ್ ಸಮೀಕ್ಷಾ ರೆಡ್ಡಿ ನಿನ್ನೆ ರಾತ್ರಿ ಸಫಾರಿಯಲ್ಲಿದ್ದ ಹೆಣ್ಣು ನೀರಾನೆಯ ದಾಳಿಗೆ ಬಲಿಯಾಗಿದ್ದಾಳೆ. ಪಕ್ಷಿಯೊಂದರ ಚಿಕಿತ್ಸೆಗೆ ತೆರಳಿದ್ದ ಸಮೀಕ್ಷಾ ರೆಡ್ಡಿ ನೀರಾನೆ
ಇದ್ದ ಆವರಣವನ್ನು ಪ್ರವೇಶಿಸಿದಾಗ ಈ ಘಟನೆ ನಡೆದಿದ್ದು ತೀವ್ರವಾಗಿ ಗಾಯಗೊಂಡಿದ್ದ ಆಕೆ ಇಂದು ಬೆಳಗ್ಗೆ ಮೃತಪಟ್ಟಿದ್ದಾಳೆ. ನೀರಾನೆಯ ದಾಳಿಯಿಂದ ಕರುಳು ಮತ್ತಿತರ ಭಾಗದಲ್ಲಿ ತೀವ್ರ ರಕ್ತಸ್ರಾವದ ಕಾರಣ ಚಿಕಿತ್ಸೆ ಫಲಕರಿಯಾಗದೆ ಸಮೀಕ್ಷಾ ರೆಡ್ಡಿ ಕೊನೆಯುಸಿರಿದ್ದಾಳೆ ಎಂದು ಸಫಾರಿಯ ಕಾರ್ಯನಿರ್ವಾಹಕ ನಿರ್ದೇಶಕ ಅಮರಾಕ್ಷರ ತಿಳಿಸಿದ್ದಾರೆ.
23 ವರ್ಷದ ಯುವ ವೈದ್ಯೆ ಸಮೀಕ್ಷಾ ರೆಡ್ಡಿಯ ಸಾವು ಈಗ ಹಲವು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ. ಪಕ್ಷಿಯೊಂದರ ಚಿಕಿತ್ಸೆಗೆಂದು ತೆರಳಿದ್ದ ಸಮೀಕ್ಷಾ ರೆಡ್ಡಿ ಯಾರ ಅನುಮತಿಯು ಇಲ್ಲದೆ ಅಪಾಯಕಾರಿ ಪ್ರಾಣಿ ಎನಿಸಿರುವ ನೀರಾನೆ ಇದ್ದ ಜಾಗಕ್ಕೆ ಕೇಜಿನ ಬೀಗ ತೆಗೆದುಕೊಂಡು ಒಳಗೆ ಪ್ರವೇಶಿಸಿದ್ದಾದರೂ ಹೇಗೆ ಎಂಬುದು ಅನುಮಾನ ಮೂಡಿದೆ.
ಈ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಇನ್ನು ಮಗಳನ್ನ ನೆನೆದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.
ಒಟ್ಟಾರೆ ಇತ್ತೀಚೆಗಷ್ಟೇ ಪದವಿ ಮುಗಿಸಿ ಭವಿಷ್ಯದ ಸುಂದರ ಬದುಕಿನ ಬಗ್ಗೆ ಕನಸು ಕಾಣುತ್ತಿದ್ದ ಧ್ರುವ ಕುಮಾರ್ ಮತ್ತು ಶೈಲಜಾ ದಂಪತಿಯ ಏಕೈಕ ಪುತ್ರಿ ಸಮೀಕ್ಷಾ ರೆಡ್ಡಿ ಕರ್ತವ್ಯದ ವೇಳೆಯಲ್ಲಿಯೇ ಮೃತಪಟ್ಟಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದ್ದು ಸೂಕ್ತ ತನಿಖೆಯಿಂದಷ್ಟೇ ಸತ್ಯಾಂಶ ಹೊರಬರಬೇಕಿದೆ.
ವೀರೇಶ್ ಜಿ ಹೊಸೂರ್, ಪಬ್ಲಿಕ್ ನೆಕ್ಸ್ಟ್. ಶಿವಮೊಗ್ಗ...
PublicNext
20/03/2026 07:05 pm