ಉಡುಪಿ; ನಗರದ ಬೀಡಿನಗುಡ್ಡೆ ಪ್ರದೇಶದಲ್ಲಿ ನಿರ್ಮಾಣಗೊಳ್ಳಬೇಕಿದ್ದ ಬಯಲು ರಂಗಮಂದಿರ ಯೋಜನೆ ಇನ್ನೂ ಪೂರ್ಣಗೊಂಡಿಲ್ಲದೆ ಸಾರ್ವಜನಿಕರ ನಿರೀಕ್ಷೆಯನ್ನು ನಿರಾಸೆಯನ್ನಾಗಿಸಿದೆ. ಹಲವು ವರ್ಷಗಳ ಹಿಂದೆ ಈ ರಂಗಮಂದಿರವನ್ನು ನಿರ್ಮಿಸುವ ಉದ್ದೇಶದಿಂದ ಭೂಮಿಯನ್ನು ಮೀಸಲಿಡಲಾಗಿತ್ತು. ಆದರೆ, ಇಂದಿಗೂ ಈ ಜಾಗ ಖಾಲಿ ಬಯಲಾಗಿ ಉಳಿದಿದ್ದು, ಯಾವುದೇ ಸ್ಪಷ್ಟವಾದ ಅಭಿವೃದ್ಧಿ ಕಂಡಿಲ್ಲ.
ಈ ಪ್ರದೇಶದಲ್ಲಿ ರಂಗಮಂದಿರ ನಿರ್ಮಾಣವಾಗಿದ್ದರೆ ಸ್ಥಳೀಯರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಭೆಗಳು ಹಾಗೂ ವಿವಿಧ ಕಲಾ ಚಟುವಟಿಕೆಗಳಿಗೆ ಉತ್ತಮ ವೇದಿಕೆ ದೊರಕುತ್ತಿತ್ತು. ಆದರೆ, ಯೋಜನೆ ವಿಳಂಬವಾಗಿರುವುದರಿಂದ ಜನರಿಗೆ ಆ ಸೌಲಭ್ಯಗಳು ಸಿಗುತ್ತಿಲ್ಲ.
ಇನ್ನೊಂದೆಡೆ, ಈ ಖಾಲಿ ಜಾಗವನ್ನು ಸರಿಯಾಗಿ ಸಂರಕ್ಷಣೆ ಮಾಡದ ಕಾರಣ ಕಸ ತ್ಯಾಜ್ಯಗಳನ್ನು ಎಸೆಯುವ ಸ್ಥಳವಾಗಿ ಮಾರ್ಪಟ್ಟಿದೆ. ಇದರಿಂದ ಪರಿಸರ ಹಾನಿ ಉಂಟಾಗುತ್ತಿದ್ದು, ಸುತ್ತಮುತ್ತಲಿನ ನಿವಾಸಿಗಳಿಗೆ ಅಸೌಕರ್ಯ ಉಂಟಾಗಿದೆ. ಜೊತೆಗೆ, ಅಲ್ಲಿ ಅರಣ್ಯ ಗಿಡಗಳು ಬೆಳೆಯುತ್ತಿರುವುದು ಹಾಗೂ ಹಾವುಗಳ ಸಂಚಾರ ಇರುವ ಭೀತಿ ಜನರಲ್ಲಿ ಆತಂಕ ಹುಟ್ಟಿಸಿದೆ.
ಮೈದಾನದ ಕಪೌಂಡ್ ಗೋಡೆ ಒಂದು ಕಡೆ ವಾಲಿದ್ದು ಬಲಿಗಾಗಿ ಕಾದು ಕುಳಿತಂತೆ ಇದೆ. ಸ್ಟೇಡಿಯಂ ಒಳ ಹೊಕ್ಕ ತಕ್ಷಣ ನಾಯಿಗಳ ದಿಂಡು ನಿಮ್ಮನ್ನ ಅಟ್ಟಾಡಿಸಿಕೊಂಡು ಬರುತ್ತವೆ. ಇಷ್ಟೆಲ್ಲಾ ಅವ್ಯವಸ್ಥೆ ಇದ್ದರೂ ಜಿಲ್ಲಾಡಿತ ಕಣ್ಣು ಮುಚ್ಚಿ ಕುಳಿತಿರುವುದು ವಿಪರ್ಯಾಸವಾಗಿದೆ.
ಒಟ್ಟಿನಲ್ಲಿ, ಬೀಡಿನಗುಡ್ಡೆ ಬಯಲು ರಂಗಮಂದಿರ ಯೋಜನೆ ಇನ್ನೂ ಕಾರ್ಯರೂಪಕ್ಕೆ ಬರದೆ ನನೆಗುದಿಗೆ ಬಿದ್ದಿದ್ದು, ಸರ್ಕಾರ ಹಾಗೂ ಸ್ಥಳೀಯ ಆಡಳಿತವು ತಕ್ಷಣ ಗಮನಹರಿಸಿ ಈ ಯೋಜನೆಯನ್ನು ಪೂರ್ಣಗೊಳಿಸಬೇಕಾಗಿದೆ.
PublicNext
21/03/2026 02:01 pm