ಗುಂಡ್ಲುಪೇಟೆ : ಇಲಾಖೆಯ ನಿಯಮಗಳನ್ನ ಉಲ್ಲಂಘಿಸುವ ಟಿಪ್ಪರ್ ಲಾರಿ ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ತಿಳಿಸಿದರು. 17 ರಂದು ತಾಲೂಕಿನ ಚಿಕ್ಕತುಪ್ಪೂರು ಸಮೀಪ ನಡೆದ ಭೀಕರ ಅಪಘಾತದಲ್ಲಿ ಶಾಲಾ ಮಕ್ಕಳು ತೀವ್ರವಾದ ಪೆಟ್ಟಿಗೊಳಗಾಗಿ ಆಸ್ಪತ್ರೆ ಸೇರಿದ ವಿಚಾರವನ್ನ ಪ್ರಸ್ತಾಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಟ್ಟಿಗೆ ಮಾತನಾಡುತ್ತ ಸ್ಥಳೀಯವಾಗಿ ಕಚ್ಚಾವಸ್ತು ಸಾಗಿಸುವ ಟಿಪ್ಪರ್ ಗಳು ರಾಜಧನ ಹಾಗೂ ಅನುಮತಿ ಪಡೆದಿರುತ್ತವೆ. ಆದರೆ ಸಾಮಾನ್ಯವಾಗಿ ಕೇರಳದಿಂದ ಬರುವ ಲಾರಿಗಳು ನಿಯಮಗಳನ್ನ ಪಾಲನೆ ಮಾಡದೆ ಸಂಚರಿಸುತ್ತಿರುವುದು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕೇರಳ ಟಿಪ್ಪರ್ ಲಾರಿಗಳ ಸಂಚಾರ ಸಂಬಂಧವಾಗಿ ಜಿಲ್ಲಾಧಿಕಾರಿಗಳು ಹಾಗೂ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕಚ್ಚಾವಸ್ತು ಸಾಗಣೆಯನ್ನ ಸಂಪೂರ್ಣವಾಗಿ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಅಕ್ರಮ ದಂಧೆಕೋರರಿಗೆ ಸಹಕಾರ ನೀಡುವವರನ್ನ ರಕ್ಷಿಸುವ ಪ್ರಶ್ನೆಯೇ ಇಲ್ಲ. ಅಧಿಕಾರಿಗಳ ಹಸ್ತಲಾಘವದಿಂದ ಸರಕಾರಕ್ಕೆ ಪ್ರತಿನಿತ್ಯ ಲಕ್ಷಾಂತರ ರೂ. ಹಣ ವಂಚನೆಯಾಗುತ್ತಿರುವುದು ಗಮನಕ್ಕೆ ಬಂದ ಮೇಲೆಯೂ ಸುಮ್ಮನೆ ಕೂರುವ ಮಾತಿಲ್ಲ. ಗಡಿಭಾಗದಲ್ಲಿ ಅನಧಿಕೃತವಾಗಿ ಸಂಚರಿಸುವ ಟಿಪ್ಪರ್ ಗಳನ್ನ ಜಪ್ತಿ ಮಾಡಿ ಕ್ರಮ ಕೈಗೊಳ್ಳಲು ಸೂಚನೆ ನೀಡುತ್ತೇನೆ ಎಂದರು. ಟಿಪ್ಪರ್ ಗಳ ಅಬ್ಬರಕ್ಕೆ ಅಂಕುಶ ಹಾಕಲು ದಿಟ್ಟಕ್ರಮ ಎಂದಿರುವ ಶಾಸಕರ ನಿರ್ಧಾರ ತ್ವರಿತವಾಗಿ ಕಾರ್ಯಗತವಾಗಬೇಕಿದೆ.
ಶಿವಕುಮಾರ್, ಪಬ್ಲಿಕ್ ನೆಕ್ಸ್ಟ್, ಗುಂಡ್ಲುಪೇಟೆ
PublicNext
21/03/2026 07:53 pm
LOADING...